ಚಿಕ್ಕೋಡಿ: ಸೇತುವೆ ಕಾಮಗಾರಿ ವಿಷಯವು ಶುಕ್ರವಾರ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.
ಸಂಸದ ಪ್ರಕಾಶ ಹುಕ್ಕೇರಿ ಮಾತನಾಡಿ, ಚಿಂಚಲಿ–ಮೋಳವಾಡ ಗ್ರಾಮಗಳ ನಡುವಿನ ಸೇತುವೆ ಕಾಮಗಾರಿ ವಿಷಯ ಪ್ರಸ್ತಾಪಿಸಿ, ಆ ಕಾಮಗಾರಿ ಕುರಿತು ತಾವು ಅಧಿಕಾರಿಗಳ ಜತೆ ನಡೆಸಿದ ಮೊಬೈಲ್ ಸಂಭಾಷಣೆಯ ಧ್ವನಿಮುದ್ರಿಕೆಯನ್ನು ಪ್ರೇಕ್ಷಕರಿಗೆ ಕೇಳಿಸಲು ಮುಂದಾದರು.
ಆಗ ಕವಟಗಿಮಠ, ‘ಇದು ರಾಷ್ಟ್ರೀಯ ಹಬ್ಬದ ವೇದಿಕೆ. ರಾಜಕೀಯ ಭಾಷಣಕ್ಕಾಗಿ ಬಳಸಿಕೊಳ್ಳುವುದು ಒಳ್ಳೆಯದಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇಬ್ಬರ ನಡುವೆ ಏರುಧ್ವನಿಯಲ್ಲಿ ಮಾತಿನ ವಾಗ್ವಾದ ನಡೆಯಿತು.
‘ರಾಜಕೀಯ ಭಾಷಣಕ್ಕೆ ಅವಕಾಶ ನೀಡಬಾರದು’ ಎಂದು ಉಪವಿಭಾಗಾಧಿಕಾರಿ ಗೀತಾ ಕೌಲಗಿ ಅವರನ್ನು ತರಾಟೆಗೆ ತಗೆದುಕೊಂಡ ಕವಟಗಿಮಠ, ಕಾರ್ಯಕ್ರಮ ಬಹಿಷ್ಕರಿಸಿ ಹೊರನಡೆದರು.