ನವದೆಹಲಿ: ಜೆಡಿಯು ನಿತೀಶ್ ಕುಮಾರ್ ಬಣದ ರಾಜ್ಯಸಭಾ ಸದಸ್ಯ ಆರ್.ಸಿ.ಪಿ ಸಿಂಗ್ ಅವರನ್ನು ಅನರ್ಹಗೊಳಿಸಬೇಕು ಎಂದು ಶರದ್ ಯಾದವ್ ಬಣ ಮಾಡಿರುವ ಮನವಿಯನ್ನು ಸಭಾಪತಿ ವೆಂಕಯ್ಯ ನಾಯ್ಡು ತಿರಸ್ಕರಿಸಿದ್ದಾರೆ.
ಸಿಂಗ್ ಅವರನ್ನು ಅನರ್ಹಗೊಳಿಸಬೇಕು ಎಂದು ಕೋರಿ ಶರದ್ ಯಾದವ್ ಗುಂಪಿನ ನಾಯಕ ಅಲಿ ಅನ್ವರ್ ಸಭಾಪತಿ ಅವರಿಗೆ ಅರ್ಜಿ ಸಲ್ಲಿಸಿದ್ದರು. ಪರಿಗಣನೆಗೆ ಯೋಗ್ಯವಾಗಿಲ್ಲ ಎಂದು ಇದೇ 23ರಂದು ನಾಯ್ಡು ಅರ್ಜಿ ತಿರಸ್ಕರಿಸಿದ್ದಾರೆ.
ಜೆಡಿಯು ಸಂಸದೀಯ ಪಕ್ಷದ ನಾಯಕ ಆರ್.ಸಿ.ಪಿ ಸಿಂಗ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಜೆಡಿಯು ಬಂಡಾಯ ನಾಯಕರಾದ ಶರದ್ ಯಾದವ್ ಮತ್ತು ಅಲಿ ಅನ್ವರ್ ಅವರನ್ನು ರಾಜ್ಯಸಭಾ ಸದಸ್ಯತ್ವದಿಂದ 2017ರ ಡಿಸೆಂಬರ್ 5ರಂದು ಅನರ್ಹಗೊಳಿಸಲಾಗಿತ್ತು.
ಶರದ್ ಹೊಸ ಪಕ್ಷ?
ಈ ಮಧ್ಯೆ, ಶರದ್ ಯಾದವ್ ಮತ್ತು ಅವರ ಬೆಂಬಲಿಗರು ಹೊಸ ಪಕ್ಷ ಸ್ಥಾಪಿಸಲು ಯೋಚಿಸುತ್ತಿದ್ದಾರೆ. ನೋಂದಣಿಗಾಗಿ ಚುನಾವಣಾ ಆಯೋಗವನ್ನು ಸಂಪರ್ಕಿಸಿದ್ದಾರೆ.
ಸಮಾಜವಾದಿ ಜನತಾ ದಳ, ಲೋಕ ತಾಂತ್ರಿಕ್ ಜನತಾ ದಳ, ಅಪ್ನಾ ಜನತಾ ದಳ ಸೇರಿದಂತೆ ಕೆಲವು ಹೆಸರುಗಳನ್ನು ಆಯೋಗಕ್ಕೆ ಅವರು ಸೂಚಿಸಿದ್ದಾರೆ.