ಬೆಂಗಳೂರು: ‘ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಇದರ ವಿರುದ್ಧ ನಿರಂತರವಾಗಿ ಅರಿವು ಮೂಡಿಸುವ ಅಗತ್ಯವಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಅಭಿಪ್ರಾಯಪಟ್ಟರು.
ಎಂ.ಸ್ಕ್ವೇರ್ ಸಂಸ್ಥೆ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಮಾದಕ ವ್ಯಸನದ ವಿರುದ್ಧ ಹೆಜ್ಜೆ’ (ವಾಕಥಾನ್) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಾದಕ ವ್ಯಸನ ವ್ಯಕ್ತಿಯ ಕನಸು ಮತ್ತು ಗುರಿ ನಾಶಪಡಿಸುತ್ತದೆ. ಕ್ರಮೇಣ ಕುಟುಂಬವೇ ನಾಶವಾಗುತ್ತದೆ. ಯುವ ಜನತೆ ಈ ವ್ಯಸನದಿಂದ ದೂರ ಇರಬೇಕು. ವ್ಯಸನದ ವಿರುದ್ಧ ಇಡೀ ಸಮಾಜ ಹೋರಾಡಬೇಕು’ ಎಂದರು.
ವಿವಿಧ ಕಾಲೇಜುಗಳ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು, 250 ಪೊಲೀಸ್ ಸಿಬ್ಬಂದಿ ವಾಕಥಾನ್ನಲ್ಲಿ ಪಾಲ್ಗೊಂಡಿದ್ದರು.