ಹೈದರಾಬಾದ್: ‘ಆಧಾರ್ನಿಂದಾಗಿ ಕಳೆದ ಮೂರು ವರ್ಷಗಳಲ್ಲಿ 2.95 ಕೋಟಿ ನಕಲಿ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ’ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಸಿ.ಆರ್. ಚೌಧರಿ ಹೇಳಿದ್ದಾರೆ.
‘ಆಧಾರ್ ಸಂಖ್ಯೆಯನ್ನು ಸಂಪರ್ಕಿಸುವ ವ್ಯವಸ್ಥೆಯಿಂದಾಗಿ ನಕಲಿ ಪಡಿತರ ಚೀಟಿ ಪತ್ತೆ ಹಚ್ಚುವುದು ಸಾಧ್ಯವಾಗಿದೆ ಮತ್ತು ಇದರಿಂದ ವಾರ್ಷಿಕ ₹ 17,000 ಕೋಟಿ ಉಳಿತಾಯವಾಗಿದೆ’ ಎಂದು ಅವರು ಸೋಮವಾರ ಹೇಳಿದ್ದಾರೆ.
‘ಒಟ್ಟು 23 ಕೋಟಿ ಪಡಿತರ ಚೀಟಿಗಳ ಪೈಕಿ 19 ಕೋಟಿ ಪಡಿತರ ಚೀಟಿಗಳಿಗೆ ಆಧಾರ್ ಸಂಖ್ಯೆ ಸಂಪರ್ಕ ಆಗಿದೆ’ ಎಂದು ತಿಳಿಸಿದ್ದಾರೆ.
‘ನಕಲಿ ಪಡಿತರ ಚೀಟಿಗಳು ರದ್ದಾಗಿರುವುದರಿಂದ ಅರ್ಹರಿಗೆ ಆಹಾರಧಾನ್ಯ ವಿತರಣೆ ಕಾರ್ಯ ಸುಲಭವಾಗಿದೆ’ ಎಂದರು.