ಉಡುಪಿ: ಎಲ್ಲ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಆಶ್ರಯದಲ್ಲಿ ಗುರವಾರ ಪ್ರತಿಭಟನೆ ನಡೆಸಲಾಯಿತು.
ಸರ್ಕಾರ ರೈತ, ಕಾರ್ಮಿಕ ಹಾಗೂ ಸಾಮಾನ್ಯ ಜನರ ವಿರೋಧಿಯಾಗಿದೆ. ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಏರುತ್ತಿರುವ ಇಂಧನ ಬೆಲೆಗಳಿಗೆ ಕಡಿವಾಣ ಹಾಕುವಂತೆ ಕಬೇಕು ಆಗ್ರಹಿಸಿದರು.
ಎಲ್ಲರಿಗೂ ಆಹಾರ ಖಾತರಿ ನೀಡಲು ಸಾರ್ವಜನಿಕ ಪಡಿತರ ವ್ಯವಸ್ಥೆ ಬಲಪಡಿಸಬೇಕು. ಕಾಳಸಂತೆ ವ್ಯಾಪಾರ ಮಟ್ಟ ಹಾಕಬೇಕು. ನಿರುದ್ಯೋಗ ಸಮಸ್ಯೆ ತೀವ್ರವಾಗಿದ್ದು ಯುವಕರು ಹತಾಶ ರಾಗಿದ್ದಾರೆ. ಆದ್ದರಿಂದ ಉದ್ಯೋಗ ಸೃಷ್ಟಿಸಿ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಲು ಸರ್ಕಾರ ಮುಂದಾಗಬೇಕು. ಕಾರ್ಮಿಕ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು.
ಬೆಲೆಗಳು ಏರಿಕೆಯಾಗುತ್ತಿರು ವುದರಿಂದ ಕಡಿಮೆ ವೇತನದಲ್ಲಿ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಆದ್ದರಿಮದ ಕನಿಷ್ಠ ವೇತನವನ್ನು ₹18,000ಕ್ಕೆ ನಿಗದಿಪಡಿಸಬೇಕು. ರಾಜ್ಯ ಮತ್ತು ರಾಷ್ಟ್ರೀಯ ಸಾರ್ವಜನಿಕ ವಲಯದ ಉದ್ಯಮಗಳ ಶೇರು ಮರಾಟ ಮತ್ತು ಬಂಡವಾಳ ಹಿಂತೆಗೆತವನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಸಿಪಿಐಎಂ ಮುಖಂಡ ಬಾಲಕೃಷ್ಣ ಶೆಟ್ಟಿ ಆಗ್ರಹಿಸಿದರು.
ಇಎಸ್ಐ ಹಾಗೂ ಭವಿಷ್ಯ ನಿಧಿ ವಿಷಯದಲ್ಲಿ ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡಬಾರದು. ದೇಶದ ಹಿತದೃಷ್ಟಿಯಿಂದ ರಕ್ಷಣಾ ಕ್ಷೇತ್ರ, ವಿಮೆ ಹಾಗೂ ರೈಲ್ವೆಯಲ್ಲಿ ವಿದೇಶಿ ನೇರ ಬಂಡವಾಳ ಹೊಡಿಕೆಯನ್ನು ನಿಲ್ಲಿಸಬೇಕು ಎಂದು ಅವರು ಹೇಳಿದರು.
ನಗರದ ಬೋರ್ಡ್ ಹೈಸ್ಕೂಲ್ನಿಂದ ಅಜ್ಜರಕಾಡಿನ ಮಹಾತ್ಮ ಗಾಂಧಿ ಸ್ಮಾರಕದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಹೋರಾಟಗಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಅಧ್ಯಕ್ಷ ಅದಮಾರು ಶ್ರೀಪತಿ ಆಚಾರ್ಯ, ವಿಮಾ ನೌಕರರ ಸಂಘದ ಯು. ಗುರುದತ್, ಸಿಐಟಿಯು ಕೆ. ಶಂಕರ್, ಎಇಟಿಯುಸಿ ಕೆ.ವಿ ಭಟ್, ಎಐಬಿಇ ಹೆರಾಲ್ಡ್ ಡಿಸೋಜಾ, ಬಿಇಎಚ್ ರವೀಂದ್ರ, ಬಿಎಸ್ಎನ್ಎಲ್ಯು ಯು. ಶಶಿಧರ ಗೊಲ್ಲ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.