ಮೈಸೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರಾಜಕೀಯದ ಗಾಂಭೀರ್ಯತೆ ಇಲ್ಲ. ಅವರು ಮೈಸೂರಿನಲ್ಲಿ ಅಪ್ರಬುದ್ಧತೆ ಮೆರೆದಿದ್ದಾರೆ ಎಂದು ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ಮಂಗಳವಾರ ಇಲ್ಲಿ ಲೇವಡಿ ಮಾಡಿದರು.
ರಾಜ್ಯದ ಕಾಂಗ್ರೆಸ್ ನಾಯಕರು ಬರೆದುಕೊಟ್ಟ ಭಾಷಣ ಓದಿದ್ದಾರೆ. ಯಾವುದನ್ನು ಓದಬೇಕು, ಓದಬಾರದು ಎಂಬುದನ್ನು ಚಿಂತಿಸುವಷ್ಟು ಬುದ್ಧಿಯೂ ಬಂದಿಲ್ಲ. ಅವರೊಬ್ಬ ’ಪಾಪ ಪಾಂಡು’ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.
ನೆಹರೂ ಕುಟುಂಬ, ದೇಶಕ್ಕೆ ಹಲವು ದೊಡ್ಡ ನಾಯಕರನ್ನು ನೀಡಿದೆ. ಅದೇ ಕುಟುಂಬದ ಸದಸ್ಯ ರಾಹುಲ್ಗೆ ಮುತ್ಸದ್ದಿತನ ಎಂಬುದಿಲ್ಲ. ಹಿರಿಯ ರಾಜಕಾರಣಿ ದೇವೇಗೌಡ ಮತ್ತು ಅವರ ಪಕ್ಷದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.