ನವದೆಹಲಿ: 2017-18ನೇ ಮಾರುಕಟ್ಟೆ ವರ್ಷದಲ್ಲಿ 20 ಲಕ್ಷ ಟನ್ ಸಕ್ಕರೆ ರಫ್ತು ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
2018ರ ಸೆಪ್ಟೆಂಬರ್ವರೆಗೆ ಯಾವುದೇ ಸುಂಕವಿಲ್ಲದೆ ರಫ್ತು ಮಾಡಲು ಅವಕಾಶ ನೀಡಲಾಗಿದೆ.
ಅಧಿಕ ದಾಸ್ತಾನು ಕರಗಿಸಲು ಮತ್ತು ಕಾರ್ಖಾನೆಗಳಿಗೆ ರೈತರ ಕಬ್ಬು ಬಾಕಿ ಪಾವತಿಸಲು ಅನುಕೂಲ ಮಾಡಿಕೊಡಲು ಈ ನಿರ್ಧಾರಕ್ಕೆ ಬರಲಾಗಿದೆ.
ದೇಶಿ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಸಾಧಿಸಲು ಕೇಂದ್ರ ಸರ್ಕಾರ ಆಮದು ಸುಂಕವನ್ನು ಶೇ 100ರಷ್ಟು ಹೆಚ್ಚಿಸಿದೆ. ರಫ್ತು ಸುಂಕ ರದ್ದು ಮಾಡಿದ್ದು, ಎರಡು ತಿಂಗಳವರೆಗೆ ದಾಸ್ತಾನು ಮಿತಿಯನ್ನೂ ವಿಧಿಸಿದೆ.
ಕಾರ್ಖಾನೆಗಳು ರೈತರಿಗೆ ನೀಡಬೇಕಿರುವ ಬಾಕಿ ಮೊತ್ತ ₹ 13,899 ಕೋಟಿ ಇದೆ.
ಇದರಲ್ಲಿ ಉತ್ತರ ಪ್ರದೇಶ (₹ 5,136 ಕೋಟಿ) ಮೊದಲ ಸ್ಥಾನದಲ್ಲಿದೆ. ಕರ್ನಾಟಕ (₹ 2,539 ಕೋಟಿ) ಮತ್ತು ಮಹಾರಾಷ್ಟ್ರ (₹ 2,348 ಕೋಟಿ) ನಂತರದ ಸ್ಥಾನದಲ್ಲಿವೆ.
2017–18ನೇ ಮಾರುಕಟ್ಟೆ ವರ್ಷಕ್ಕೆ 2.70 ಕೋಟಿ ಟನ್ ಸಕ್ಕರೆ ಉತ್ಪಾದನೆ ನಿರೀಕ್ಷೆ ಮಾಡಲಾಗಿದೆ. 2016–17ರಲ್ಲಿ 2.03 ಕೋಟಿ ಟನ್ ಸಕ್ಕರೆ ಉತ್ಪಾದನೆ ಆಗಿತ್ತು.