ನವದೆಹಲಿ: ಹತ್ತನೇ ತರಗತಿ ಸಿಬಿಎಸ್ಇ ಗಣಿತ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಮೇಲೆ ಮಹಿಳೆ ಹಾಗೂ ಶಿಕ್ಷಕ ಸೇರಿ ಮೂವರನ್ನು ಹಿಮಾಚಲ ಪ್ರದೇಶದಲ್ಲಿ ಗುರುವಾರ ಬಂಧಿಸಲಾಗಿದೆ.
ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಮೇಲೆ ಕಳೆದ ವಾರ ಉನಾ ನಗರದ ಡಿಎವಿ ಸೆಂಚ್ಯೂರಿ ಪಬ್ಲಿಕ್ ಶಾಲೆಯ ಮೂವರು ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದರು.
‘ಬಂಧಿತರಾದ ಪಂಜಾಬ್ನ ಮಹಿಳೆ ಮತ್ತು ಶಿಕ್ಷಕ ರಾಕೇಶ್ ಕುಮಾರ್ ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ಹಂಚುತ್ತಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಪ್ರಮುಖ ಆರೋಪಿ ರಾಕೇಶ್ ಕುಮಾರ್ ಡಿಎವಿ ಸೆಂಚ್ಯೂರಿ ಪಬ್ಲಿಕ್ ಶಾಲೆಯಲ್ಲಿ ಕಳೆದ ಎಂಟು ವರ್ಷದಿಂದ ಅರ್ಥಶಾಸ್ತ್ರ ಶಿಕ್ಷಕನಾಗಿದ್ದ. ಈತನೇ ಮಾರ್ಚ್ 28 ರಂದು ನಡೆದ ಗಣಿತ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿದ್ದಾನೆ. ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆಯೂ ಪರೀಕ್ಷೆಗೆ ಮೂರು ದಿನ ಮೊದಲು, ಮಾರ್ಚ್ 23 ರಂದು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿತ್ತು. 40ಕ್ಕೂ ಹೆಚ್ಚು ವಾಟ್ಸ್ಆ್ಯಪ್ ಗುಂಪಿನಲ್ಲಿ ಹಂಚಿಕೆಯಾಗಿತ್ತು.
ಪ್ರಾಂಶುಪಾಲನಾಗಲು ಬಯಸಿದ್ದ: ಶಿಕ್ಷಕ ರಾಕೇಶ್ ಕುಮಾರ್ ತಾನು ಕೆಲಸ ಮಾಡುತ್ತಿದ್ದ ಶಾಲೆಯ ಪ್ರಾಂಶುಪಾಲನಾಗಲು ಬಯಸಿದ್ದ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.