ಬೆಂಗಳೂರು: ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉದಯ್ ಬಿ. ಗರುಡಾಚಾರ್ ಬುಧವಾರ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು.
ಹಸನ್ಮುಖರಾಗಿ ಎಲ್ಲರನ್ನೂ ನಗಿಸುತ್ತಾ, ಕಾರ್ಯಕರ್ತರನ್ನು ಹುರಿದುಂಬಿಸುತ್ತಾ, ರಸ್ತೆಯಲ್ಲಿ ಎದುರಾದವರನ್ನು ಮತ ಕೇಳುತ್ತಾ ಸಾಗಿದರು.
ಸುಧಾಮನಗರ, ಹೊಂಬೇಗೌಡ ನಗರ, ಸಿದ್ದಾಪುರ ಹೌಸಿಂಗ್ ಬೋರ್ಡ್ ಕಾಲೊನಿ, ಜಯನಗರ ವಾರ್ಡ್ 153, ಸುಧಾಮ ನಗರದಲ್ಲಿ ಮತ ಕೇಳಿದರು. 100ಕ್ಕೂ ಹೆಚ್ಚು ಕಾರ್ಯಕರ್ತರು ಅವರ ಜೊತೆ ಹೆಜ್ಜೆ ಹಾಕಿದರು.
ಬೆಳಿಗ್ಗೆ 6 ಗಂಟೆಗೆ ಎದ್ದಿದ್ದ ಅವರು, 7.30ಕ್ಕೆ ಪ್ರಚಾರ ಆರಂಭಿಸಿದರು. ಮಧ್ಯಾಹ್ನ 1.30ರಿಂದ 4 ಗಂಟೆವರೆಗೆ ಬಿಡುವು ಪಡೆದು ಮತ್ತೆ ಮತಯಾಚನೆ ಮುಂದುವರಿಸಿದರು.
‘ಈ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿಲ್ಲ. ಕೊಳೆಗೇರಿಗಳು ಹಾಗೆಯೇ ಇವೆ. ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಕುಡಿಯುವ ನೀರಿನ ಪೂರೈಕೆಯೂ ಸಮರ್ಪಕವಾಗಿಲ್ಲ. ರಸ್ತೆಗಳು ಹದಗೆಟ್ಟಿವೆ. ಇಂತಹ ಅನೇಕ ವಿಷಯಗಳು ಪ್ರಚಾರದ ವೇಳೆ ನನ್ನ ಗಮನಕ್ಕೆ ಬಂದಿವೆ’ ಎನ್ನುತ್ತಾರೆ ಗರುಡಾಚಾರ್.