ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಣದಲ್ಲಿ ಕಸದ ರಾಶಿ: ಜನರ ಆಕ್ರೋಶ

ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಸಾರ್ವಜನಿಕರು
Last Updated 1 ಜೂನ್ 2018, 11:27 IST
ಅಕ್ಷರ ಗಾತ್ರ

ಚನ್ನಪಟ್ಟಣ: ನಗರಸಭೆ 23 ಮತ್ತು 24ನೇ ವಾರ್ಡ್ ವ್ಯಾಪ್ತಿಯ ಗನ್ನಿಮಿಯಾ ರಸ್ತೆ ಹಾಗೂ ಇತರೆ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಇಲ್ಲದೆ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೊಳೆತು ಗಬ್ಬೆದ್ದು ನಾರುತ್ತಾ ಜನರು ಮತ್ತು ಶಾಲಾ ಮಕ್ಕಳು ದುರ್ನಾತ ತಾಳಲಾರದೆ ಮೂಗು ಮುಚ್ಚಿಕೊಂಡು ತಿರುಗಾಡುಂತಾಗಿದೆ.

ಕಸದ ರಾಶಿ ತುಂಬಿ ತುಳುಕುತ್ತಿದ್ದರೂ ನಗರಸಭೆ ಇತ್ತ ಗಮನ ನೀಡಿಲ್ಲ.ಇದರಿಂದಾಗಿ ದಿನದಿಂದ ದಿನಕ್ಕೆ ಕಸದ ರಾಶಿ ಹೆಚ್ಚುತ್ತಲೇ ಇದೆ. ಮಳೆಯಿಂದಾಗಿ ಕಸದ ರಾಶಿ ಗಬ್ಬೆದ್ದು ನಾರುತ್ತಿದೆ. ಕಸದ ರಾಶಿ ಸುತ್ತ ಕ್ರಿಮಿಕೀಟ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿ ಕಾಡುತ್ತಿದೆ ಎಂದು ಈ ಭಾಗದ ನಾಗರಿಕರು ಅಲವತ್ತುಗೊಂಡಿದ್ದಾರೆ.

ನಗರಸಭೆ ಸ್ಚಚ್ಛತಾ ಕಾರ್ಯ ನಡೆಸದೇ ಇರುವುದರಿಂದ ಕಲವು ಬಡಾವಣೆಗಳಿಗೆ ಪ್ರಮುಖ ಸಂಪರ್ಕ ರಸ್ತೆಯಾದ ಗನ್ನಿಮಿಯಾ ರಸ್ತೆ ಬದಿಯಲ್ಲಿ ಹಾಗೂ ಸಾರ್ವಜನಿಕರ ಕುಡಿಯುವ ನೀರಿನ ಕೊಳವೆಬಾವಿ ಇರುವ ಸ್ಥಳದಲ್ಲಿ ಕಸಕಡ್ಡಿ, ತ್ಯಾಜ್ಯವಸ್ತು ಕೊಳೆಯುತ್ತಿವೆ ಎಂದು 23ನೇ ವಾರ್ಡ್ ನಿವಾಸಿಗಳಾದ ನವಾಜ್, ಸಲೀಂ ಆರೋಪಿಸಿದ್ದಾರೆ.

ನಗರಸಭೆಗೆ ಸ್ವಚ್ಛಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ನಗರಸಭೆ ಜೀವಂತವಾಗಿಲ್ಲ ಎಂದು ಸ್ಥಳೀಯರಾದ ಅಕ್ರಂ ಖಾನ್, ಸೈಯದ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಸದ ರಾಶಿಯಿಂದ ಮಲೇರಿಯಾ, ಡೆಂಗಿ, ಚಿಕುನ್‌ಗುನ್ಯಾ, ಟೈಫಾಯ್ಡ್‌ನಿಂದ ಬಳಲುವಂತಾಗಿದೆ ಎಂದು ಶಾಲಾ ಶಿಕ್ಷಕರಾದ ಶಬಾನಾ,ವಹಿದಾ ಆತಂಕ ವ್ಯಕ್ತಪಡಿಸಿದರು.

ನಗರಸಭೆಯಲ್ಲಿ ಕಸ ತೆರವು ಮಾಡಲು ಲಕ್ಷಾಂತರ ರೂಪಾಯಿ ವ್ಯಯ ಮಾಡಿ ಖರೀದಿಸಿರುವ ಆಟೊ ಟಿಪ್ಪರ್‌ಗಳು, ಟಿಪ್ಪರ್ ಲಾರಿ, ಟ್ರಾಕ್ಟರ್‌ಗಳಿದ್ದರೂ ಕಸ ತೆರವುಗೊಳಿಸುತ್ತಿಲ್ಲ.ಇದರಿಂದಾಗಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ
ಉಲ್ಬಣವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

**
ನಗರಸಭೆ ಅಧಿಕಾರಿಗಳು ಕಸದ ರಾಶಿ ತೆರವುಗೊಳಿಸಿ ಈ ಭಾಗದ ಜನರ ಆರೋಗ್ಯ ರಕ್ಷಣೆ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ
ಅಕ್ರಂ ಖಾನ್, ಸಮಾಜ ಸೇವಕ
**

ಕಸ ವಿಲೇವಾರಿ ಮಾಡಲು ಸೂಕ್ತ ಜಾಗದ ಸಮಸ್ಯೆ ಇರುವ ಕಾರಣ ಈ ರೀತಿ ತಾತ್ಕಾಲಿಕ ತಡೆ ಉಂಟಾಗಿದೆ. ಶೀಘ್ರ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು – ಆನಂದ್, ಪೌರಾಯುಕ್ತ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT