ಔರಂಗಾಬಾದ್ : ಅಂಬೇಡ್ಕರ್ ಅವರ ಹೆಸರಿನ ಜತೆ ‘ಮಹಾರಾಜ’ ಪದವನ್ನು ಸೇರಿಸಿದ ಆರೋಪಕ್ಕೆ ಸಂಬಂಧಿಸಿದಂತೆ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದ ಹಂಗಾಮಿ ಕುಲಸಚಿವೆ ಸಾಧನಾ ಪಾಂಡೆ ಅವರನ್ನು ಅಮಾನತುಗೊಳಿಸಲಾಗಿದೆ.
ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರ ಸಭೆಯಲ್ಲಿ ಕುಲಪತಿ ಬಿ.ಎ.ಛೋಪ್ಡೆ ಅವರು ಸಾಧನಾ ಅವರ ವಿರುದ್ಧ ಈ ಕ್ರಮ ಕೈಗೊಂಡರು.
ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಚುನಾವಣೆ ಕುರಿತು ಚರ್ಚಿಸಲು ಸಭೆ ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸಾಧನಾ, ಅಂಬೇಡ್ಕರ್ ಅವರನ್ನು ಹೀಗೆ ಸಂಬೋಧಿಸಿದಾಗ ಸಭೆಯಲ್ಲಿ ಗದ್ದಲ ಉಂಟಾಯಿತು.
‘ಸಾಧನಾ ಅವರು ಬಲಪಂಥೀಯ ಸಿದ್ಧಾಂತದವರಾಗಿದ್ದು, ದಲಿತ ನಾಯಕನ ಹೆಸರಿಗೆ ದುರುದ್ದೇಶದಿಂದಲೇ ಮಹಾರಾಜ ಪದ ಸೇರಿಸಿದ್ದಾರೆ. ಹೀಗಾಗಿ ಅವರನ್ನು ಅಮಾನತು ಮಾಡಬೇಕು’ ಎಂದು ಸೆನೆಟ್ ಸದಸ್ಯರು ಆಗ್ರಹಿಸಿದರು.
ನಂತರ ಕುಲಪತಿ ಛೋಪ್ಡೆ, ಸಾಧನಾ ಅವರನ್ನು ಸಭೆಯಿಂದ ಹೊರ ನಡೆಯುವಂತೆ ಸೂಚಿಸಿದರು.