ನವದೆಹಲಿ: ಎಐಎಡಿಎಂಕೆ ಚಿಹ್ನೆಗಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಲಂಚ ನೀಡಿಕೆ ಪ್ರಕರಣದ ಮಧ್ಯವರ್ತಿ ಸುಖೇಶ್ ಚಂದ್ರಶೇಖರ್ನನ್ನು ಕೋರ್ಟ್ ವಿಚಾರಣೆಗೆ ಬೆಂಗಳೂರಿಗೆ ಕರೆದೊಯ್ದ ವೇಳೆ ಮುಕ್ತವಾಗಿ ಸಂಚರಿಸಲು ಅನುವು ಮಾಡಿಕೊಟ್ಟ ಆರೋಪದ ಮೇಲೆ ಏಳು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಲಂಚ ನೀಡಲು ಎಐಎಡಿಎಂಕೆ (ಅಮ್ಮಾ) ಪಕ್ಷದ ಮುಖಂಡ ಟಿಟಿವಿ ದಿನಕರನ್ ಅವರಿಂದ ಹಣ ಪಡೆದ ಆರೋಪದಲ್ಲಿ ಏಪ್ರಿಲ್ 16ರಂದು ಚಂದ್ರಶೇಖರ್ ಬಂಧನವಾಗಿತ್ತು.
ಅಕ್ಟೋಬರ್ 9ರಿಂದ 16ರ ಅವಧಿಯಲ್ಲಿ ದೆಹಲಿ ಪೊಲೀಸರು ಚಂದ್ರಶೇಖರ್ನನ್ನು ಕೋರ್ಟ್ ವಿಚಾರಣೆಗಾಗಿ ಮುಂಬೈ, ಬೆಂಗಳೂರು ಹಾಗೂ ಕೊಯಮತ್ತೂರುಗಳಿಗೆ ಭದ್ರತೆಯಲ್ಲಿ ಕರೆದೊಯ್ದಿದ್ದರು.
ದೆಹಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಅವರಿಗೆ ಆದಾಯ ತೆರಿಗೆ ಇಲಾಖೆ ಸಲ್ಲಿಸಿರುವ ವರದಿ ಪ್ರಕಾರ, ‘ಬೆಂಗಳೂರಿಗೆ ಕರೆದೊಯ್ದ ವೇಳೆ ಆರೋಪಿಯು ಮುಕ್ತವಾಗಿ ಸಂಚರಿಸಲು ಪೊಲೀಸರು ಅನುವು ಮಾಡಿಕೊಟ್ಟಿದ್ದರು. ಅಲ್ಲದೆ ಆತನಿಗೆ ತನ್ನ ವ್ಯವಹಾರಗಳನ್ನು ನಡೆಸಲೂ ಅವಕಾಶ ನೀಡಿದ್ದರು’ ಎಂದು ಉಲ್ಲೇಖಿಸಲಾಗಿದೆ.
ವರದಿ ಆಧರಿಸಿ ಗುರುವಾರ ತನಿಖೆಗೆ ಆದೇಶಿಸಲಾಗಿದ್ದು, ತನಿಖೆ ಮುಗಿಯುವ ತನಕ ಮೂರನೇ ಬೆಟಾಲಿಯನ್ನ ಏಳು ಪೊಲೀಸ್ ಸಿಬ್ಬಂದಿಯನ್ನು ಅಮಾನತಿನಲ್ಲಿಡಲಾಗಿದೆ ಎಂದು ಆಯುಕ್ತರ ಕಚೇರಿ ತಿಳಿಸಿದೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.