ನವದೆಹಲಿ: ಮೃತಪಟ್ಟ ವ್ಯಕ್ತಿಗಳ ಗುರುತು ಪತ್ತೆ ಮಾಡುವ ಸಂದರ್ಭಗಳಲ್ಲಿ ವಿಧಿವಿಜ್ಞಾನದ ಉದ್ದೇಶಗಳಿಗೆ ‘ಆಧಾರ್’ ಬಯೋಮೆಟ್ರಿಕ್ ಉಪಯೋಗಿಸುವುದು ಕಾರ್ಯಸಾಧುವಲ್ಲ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ದೆಹಲಿ ಹೈಕೋರ್ಟ್ಗೆ ತಿಳಿಸಿದೆ.
ದೇಹಗಳ ಪತ್ತೆಗೆ ‘ಆಧಾರ್’ ಬಯೋಮೆಟ್ರಿಕ್ ಬಳಸುವುದು ‘ಆಧಾರ್’ ಕಾಯ್ದೆಗೆ ವಿರುದ್ಧವಾಗಿದೆ ಎಂದು ಪ್ರಾಧಿಕಾರವು ಪ್ರತಿಪಾದಿಸಿದೆ.
ಕಾಯ್ದೆಯಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಹೊರತುಪಡಿಸಿ ಅನ್ಯ ಯಾವುದೇ ಉದ್ದೇಶಗಳಿಗೆ ಬಯೋಮೆಟ್ರಿಕ್ ಬಳಸಬಾರದು ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ತೀರ್ಪು ನೀಡಿದೆ ಎಂದು ಪ್ರಾಧಿಕಾರದ ವಕೀಲ ಜೋಹೆಬ್ ಹುಸ್ಸೇನ್ ಉಲ್ಲೇಖಿಸಿದರು.
ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಮತ್ತು ನ್ಯಾಯಮೂರ್ತಿ ವಿ.ಕೆ. ರಾವ್ ಅವರನ್ನೊಳಗೊಂಡ ಪೀಠಕ್ಕೆ ಈ ವಿಷಯವನ್ನು ಮನವರಿಕೆ ಮಾಡಿದರು.
ನಾಪತ್ತೆಯಾಗಿರುವ ಮಕ್ಕಳನ್ನು ಪತ್ತೆ ಮಾಡಲು ಬಯೋಮೆಟ್ರಿಕ್ ಬಳಸಲಾಗುತ್ತಿದೆ. ಹೀಗಾಗಿ, ದೇಹಗಳ ಪತ್ತೆಗೂ ಬಳಸಲು ಕೇಂದ್ರ ಸರ್ಕಾರ ಮತ್ತು ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು ಎಂದು ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಅರ್ಜಿದಾರ ಅಮಿತ್ ಸಹ್ನಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 23ಕ್ಕೆ ಮುಂದೂಡಲಾಯಿತು.