ಮುಂಬೈ: ಮುಂಬೈನಿಂದ ಗುಜರಾತ್ನ ಭುಜ್ಗೆ ಸಂಚರಿಸಿದ, ಅಲೈಯನ್ಸ್ ಏರ್ನ ವಿಮಾನವೊಂದು ಎಂಜಿನ್ನ ರಕ್ಷಾಕವಚ ಇಲ್ಲದೇ ಹಾರಾಟ ನಡೆಸಿದ ಘಟನೆ ಬುಧವಾರ ನಡೆದಿದೆ.
ಈ ಘಟನೆ ಕುರಿತು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶಕರು (ಡಿಜಿಸಿಎ) ತನಿಖೆಗೆ ಆದೇಶಿಸಿದ್ದಾರೆ. 70 ಪ್ರಯಾಣಿಕರಿದ್ದ ಈ ವಿಮಾನ ಭುಜ್ ವಿಮಾನ ನಿಲ್ಧಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ ಎಂದು ಮೂಲಗಳು ತಿಳಿಸಿವೆ.
ಎಂಜಿನ್ಗೆ ರಕ್ಷಾಕವಚವನ್ನು ಹೊದಿಸದೇ ವಿಮಾನ ಟೇಕಾಫ್ ಆಗಿರುವ ವಿಷಯ ತಿಳಿದ ನಂತರ, ರನ್ವೇಯಲ್ಲಿ ಬಿದ್ದಿದ್ದ ರಕ್ಷಾಕವಚವನ್ನು ಹುಡುಕಿ ತರಲಾಯಿತು ಎಂದು ಮೂಲಗಳು ಹೇಳಿವೆ.
‘ಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಮುಂಬೈ–ಭುಜ್ ವಿಮಾನದ (91–625) ಎಡಭಾಗದ ಎಂಜಿನ್ ಕವಚ ಇಲ್ಲದೇ ಟೇಕಾಫ್ ಆಗಿರುವುದು ಗಮನಕ್ಕೆ ಬಂದಿತು. ತಕ್ಷಣವೇ ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ) ಅವರು ವಿಮಾನನಿಲ್ದಾಣ ಅಧಿಕಾರಿಗಳಿಗೆ ಮಾಹಿತಿ ನೀಡಿದರು’ ಎಂದು ಅಧಿಕಾರಿಗಳು ಹೇಳಿದ್ದಾರೆ.