ಅಹಮದಾಬಾದ್: ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ಪ್ರತಿನಿಧಿಸುತ್ತಿರುವ ಗಾಂಧಿನಗರ ಕ್ಷೇತ್ರದಿಂದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕಣಕ್ಕಿಳಿಯಬೇಕು ಎಂಬುದು ಕಾರ್ಯಕರ್ತರ ಬಯಕೆ ಎಂದು ಶಾಸಕ ಕಿಶೋರ್ ಚೌಹಾಣ್ ಹೇಳಿದ್ದಾರೆ.
ಗಾಂಧಿನಗರ ಕ್ಷೇತ್ರದ ಕಾರ್ಯಕರ್ತರು ಹಾಗೂ ಮುಖಂಡರ ಅಭಿಪ್ರಾಯ ಸಂಗ್ರಹಿಸುವ ಸಲುವಾಗಿ ಶನಿವಾರ ವೀಕ್ಷಕರನ್ನು ಕಳುಹಿಸಲಾಗಿತ್ತು. ‘ಕಾರ್ಯಕರ್ತರು ಅಮಿತ್ ಶಾ ಬಗ್ಗೆ ಒಲವು ಹೊಂದಿದ್ದಾರೆ. ಈ ಪ್ರಸ್ತಾವವನ್ನು ನಾನು ವೀಕ್ಷಕರ ಮುಂದೆ ಇಟ್ಟೆ. ಎಲ್ಲರೂ ಇದಕ್ಕೆ ಬೆಂಬಲ ಸೂಚಿಸಿದರು’ಎಂದು ಚೌಹಾಣ್ ಹೇಳಿದ್ದಾರೆ.
ಚೌಹಾಣ್ ಅವರು ಗಾಂಧಿನಗರ ಲೋಕಸಭಾ ವ್ಯಾಪ್ತಿಯ ವೇಜಲ್ಪುರ ಕ್ಷೇತ್ರದ ಶಾಸಕ. ಇದೇ ಲೋಕಸಭಾ ವ್ಯಾಪ್ತಿಯ ಸರ್ಕೇಜ್ ವಿಧಾನಸಭಾ ಕ್ಷೇತ್ರದಿಂದ ಅಮಿತ್ ಶಾ ಈ ಹಿಂದೆ ಸ್ಪರ್ಧಿಸಿದ್ದರು.