ಅರಾ/ಪಟ್ನಾ (ಪಿಟಿಐ): ಆರ್ಜೆಡಿ ಶಾಸಕಿ ಕಿರಣ್ ದೇವಿ, ಅವರ ಪತಿ ಮಾಜಿ ಶಾಸಕ ಅರುಣ್ ಯಾದವ್ ಮತ್ತು ಇತರರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ಶೋಧ ಕೈಗೊಂಡರು.
ಕಿರಣ್ ದೇವಿ ಅವರು ಭೋಜ್ಪುರ ಜಿಲ್ಲೆಯ ಸಂದೇಶ್ ಕ್ಷೇತ್ರದ ಶಾಸಕಿ. 2015ಕ್ಕೂ ಮುನ್ನ ಈ ಕ್ಷೇತ್ರವನ್ನು ಅವರ ಪತಿ ಪ್ರತಿನಿಧಿಸುತ್ತಿದ್ದರು. ಈ ಶೋಧದ ವೇಳೆ ಶಾಸಕರು ಮನೆಯಲ್ಲಿರಲಿಲ್ಲ. ಭೋಜ್ಪುರದ ಅಜಿಯೋನ್ ಸೇರಿದಂತೆ ಶಾಸಕರಿಗೆ ಸಂಬಂಧಿಸಿದ ಇತರ ಸ್ಥಳಗಳಲ್ಲಿಯೂ ಅಧಿಕಾರಿಗಳು ಶೋಧ ನಡೆಸಿದರು.
ಅರುಣ್ ಯಾದವ್ ಮತ್ತು ಕಿರಣ್ ದೇವಿ ವಿರುದ್ಧ ಅರಾ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಬಿಹಾರ ಪೊಲೀಸರು 16 ಎಫ್ಐಆರ್ಗಳನ್ನು ದಾಖಲಿಸಿದ್ದಾರೆ. ಈ ದಂಪತಿ ವಿರುದ್ಧ ಇ.ಡಿ 2021ರಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಕ್ರಮಿನಲ್ ಪ್ರಕರಣ ದಾಖಲಿಸಿದೆ.
ಶೋಧದ ವೇಳೆ ಅರುಣ್ ಯಾದವ್ ಮತ್ತು ಕುಟುಂಬದ ಕೆಲವರ ಹೇಳಿಕೆಗಳನ್ನು ದಾಖಲಿಸಿಕೊಂಡ ಇ.ಡಿ ಅಧಿಕಾರಿಗಳೂ, ಕೆಲ ಆಸ್ತಿ ದಾಖಲೆಗಳು ಮತ್ತು ಬ್ಯಾಂಕ್ ಖಾತೆಗಳ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ‘ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಭಯಪಡುತ್ತಿದೆ ಎಂಬುದನ್ನು ಈ ದಾಳಿಗಳು ತೋರಿಸುತ್ತವೆ’ ಎಂದಿದ್ದಾರೆ.