ಚೆನ್ನೈ: ತಮಿಳುನಾಡು ಮೀನುಗಾರಿಕಾ ಸಚಿವ, ಡಿಎಂಕೆ ನಾಯಕ ಅನಿತಾ ಆರ್. ರಾಧಕೃಷ್ಣನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಾರ್ವಜನಿಕವಾಗಿ ಅಪಪ್ರಚಾರ ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಪೊಲೀಸರು ಹಾಗೂ ಚುನಾವಣಾ ಆಯೋಗವನ್ನು ಸಂಪರ್ಕಿಸುವುದಾಗಿ ಪಕ್ಷ ತಿಳಿಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ‘ಪ್ರಧಾನಿ ಮೋದಿ ಅವರ ವಿರುದ್ಧ ತುಚ್ಛ ರೀತಿಯ ಹೇಳಿಕೆಗಳು ಮತ್ತು ಸಾರ್ವಜನಿಕ ಭಾಷಣವನ್ನು ಮಾಡುವ ಮೂಲಕ ಡಿಎಂಕೆ ನಾಯಕರು ತಮ್ಮ ಅಸಭ್ಯ ವರ್ತನೆಯಲ್ಲಿ ಕೆಳಮಟ್ಟಕ್ಕೆ ತಲುಪಿದ್ದಾರೆ’ ಎಂದು ಹೇಳಿದ್ದಾರೆ.
ಟೀಕೆ ಮಾಡಲು ಬೇರೆ ಏನೂ ಸಿಗದ ಕಾರಣ ಡಿಎಂಕೆ ನಾಯಕರು ಈ ಮಟ್ಟಕ್ಕೆ ಇಳಿದಿದ್ದಾರೆ. ರಾಧಕೃಷ್ಣನ್ ಅವರು ಭಾಷಣ ಮಾಡುವಾಗ ಡಿಎಂಕೆ ಸಂಸದೆ ಕನಿಮೊಳಿ ಅವರು ಕೂಡ ವೇದಿಕೆಯ ಮೇಲೆ ಇದ್ದರು. ಆದರೂ ಸಹ ತಮ್ಮ ಪಕ್ಷದ ನಾಯಕರನ್ನು ತಡೆಯುವ ಪ್ರಯತ್ನ ಮಾಡಲಿಲ್ಲ ಎಂದು ಅಣ್ಣಾಮಲೈ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಅನಿತಾ ರಾಧಕೃಷ್ಣನ್ ಅವರ ವಿರುದ್ಧ ತ್ವರಿತ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ದೂರು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರ ವಿರುದ್ಧ ಅನಿತಾ ರಾಧಕೃಷ್ಣನ್ ಅವರು ಮಾತನಾಡಿರುವ ವಿಡಿಯೊ ತುಣುಕನ್ನು ಅಣ್ಣಾಮಲೈ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
DMK leaders have reached a new low in their uncouth behaviour by passing vile comments & unpardonable public discourse against our Hon PM Thiru @narendramodi avl.
— K.Annamalai (மோடியின் குடும்பம்) (@annamalai_k) March 24, 2024
When they have nothing to criticise, this is the level DMK leaders have stooped. DMK MP Smt Kanimozhi avl was on… pic.twitter.com/sTdQSNjkir
‘ಅನಿತಾ ರಾಧಕೃಷ್ಣನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರನ್ನು ಸಚಿವ ಸ್ಥಾನದಿಂದ ಕೂಡಲೇ ವಜಾಗೊಳಿಸಬೇಕು ಎಂದು ಬಿಜೆಪಿ ಉಪಾಧ್ಯಕ್ಷ ನಾರಾಯಣನ್ ತಿರುಪತಿ ಆಗ್ರಹಿಸಿದ್ದಾರೆ. ರಾಧಕೃಷ್ಣನ್ ಅವರನ್ನು ಬಂಧಿಸಿ, ಜೈಲಿಗೆ ಕಳುಹಿಸಬೇಕು’ ಎಂದು ತಿರುಪತಿ ಒತ್ತಾಯಿಸಿದ್ದಾರೆ.
ರಾಧಕೃಷ್ಣನ್ ಅವರು ಮೋದಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವಾಗ ಸಂಸದೆ ಕನಿಮೊಳಿ ಅವರು ಕೂಡ ವೇದಿಕೆ ಮೇಲೆ ಇದ್ದರು. ಆದ್ದರಿಂದ ಅವರ ವಿರುದ್ಧವೂ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿರುಪತಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.