ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕರ್ನಾಟಕ ಸಹ ಉಸ್ತುವಾರಿಯನ್ನಾಗಿ ಕಿರಣ್ ಮಹೇಶ್ವರಿ ಅವರನ್ನು ನೇಮಿಸಿರುವ ಬಿಜೆಪಿ ಹೈಕಮಾಂಡ್, ಉಸ್ತುವಾರಿಯನ್ನಾಗಿ ಪಿ. ಮುರಳೀಧರರಾವ್ ಅವರನ್ನು ಮುಂದುವರಿಸಿದೆ.
2004ರಿಂದ 2009ರವರೆಗೆ ರಾಜಸ್ಥಾನದ ಉದಯಪುರ ಲೋಕಸಭೆ ಕ್ಷೇತ್ರದ ಸಂಸದೆಯಾಗಿದ್ದ ಕಿರಣ್ ಮಹೇಶ್ವರಿ, 2013ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ರಾಜಸಮಂದ್ ಕ್ಷೇತ್ರದಿಂದ ಜಯಿಸಿ ವಸುಂಧರಾ ರಾಜೆ ಸಂಪುಟದಲ್ಲಿ ಸಚಿವೆಯಾಗಿದ್ದರು. ಅಲ್ಲದೆ, ಇವರು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ತಮಿಳುನಾಡಿಗೆ ಸಿ.ಟಿ. ರವಿ: ರಾಜ್ಯ ಬಿಜೆಪಿ ಮುಖಂಡ, ಶಾಸಕ ಸಿ.ಟಿ. ರವಿ ಅವರನ್ನು ತಮಿಳುನಾಡು, ಪುದುಚೇರಿ ಮತ್ತು ಅಂಡಮಾನ್, ನಿಕೋಬಾರ್ ಸಹ ಉಸ್ತುವಾರಿಯನ್ನಾಗಿ, ರೈಲ್ವೆ ಸಚಿವ ಪೀಯೂಷ್ ಗೋಯಲ್ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.