ಕೋಲ್ಕತ್ತ: ಮಾಜಿ ನ್ಯಾಯಮೂರ್ತಿ ಹಾಗೂ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕುರಿತು ವಿಡಿಯೊವೊಂದರಲ್ಲಿ ವಿವಾದಿತ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದಕ್ಕೆ ಟಿಎಂಸಿ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಮಮತಾ ಬ್ಯಾನರ್ಜಿ ಅವರ ಸಾವಿನ ಗಂಟೆ ಈಗಾಗಲೇ ಮೊಳಗಲು ಆರಂಭವಾಗಿದೆ’ ಎಂದು ಅಭಿಜಿತ್ ಅವರು ವರದಿಗಾರರೊಬ್ಬರಿಗೆ ಹೇಳುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್, ‘ಅಭಿಜಿತ್ ಅವರು ಮಮತಾ ಅವರ ಸಾವನ್ನು ಬಯಸುತ್ತಿದ್ದಾರೆ’ ಎಂದು ಹೇಳಿದೆ. ‘ಟಿಎಂಸಿಯ ರಾಜಕೀಯ ಸಾವು’ ಎಂಬರ್ಥದಲ್ಲಿ ಅಭಿಜಿತ್ ಅವರು ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.
‘ತಮ್ಮ ಮಾತು ಎಷ್ಟು ಕೆಟ್ಟದಾಗಿದೆ ಎಂಬುದನ್ನು ಬಿಜೆಪಿ ಅಭ್ಯರ್ಥಿ ಅಭಿಜಿತ್ ಅವರು ತೋರಿಸಿಕೊಟ್ಟಿದ್ದಾರೆ’ ಎಂದು ಟಿಎಂಸಿ ನಾಯಕಿ ಶಶಿ ಪಂಜಾ ಆಕ್ರೋಶ ವ್ಯಕ್ತಪಡಿಸಿದರು.
ಅಭಿಜಿತ್ ಅವರು ಕಲ್ಕತ್ತ ಹೈಕೋರ್ಟ್ನ ನ್ಯಾಯಮೂರ್ತಿ ಹುದ್ದೆಗೆ ಮಾರ್ಚ್ 5ರಂದು ರಾಜೀನಾಮೆ ನೀಡಿದ್ದರಲ್ಲದೆ, ಬಳಿಕ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.