ನವದೆಹಲಿ: ಅಕ್ಟೋಬರ್ 2 ರಿಂದ 7 ರವರೆಗೆ ದೇಶದಾದ್ಯಂತ ಪಕ್ಷದ ಕಾರ್ಯಕರ್ತರು ಖಾದಿ ಅಂಗಡಿಗಳಿಗೆ ಭೇಟಿ ನೀಡುತ್ತಾರೆ ಮತ್ತು ಅದರ ಬಳಕೆಯನ್ನು ಉತ್ತೇಜಿಸಲು ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.
ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆ ಅಂಗವಾಗಿ ನಡ್ಡಾ ರಾಷ್ಟ್ರ ರಾಜಧಾನಿಯ ಖಾದಿ ಅಂಗಡಿಗೆ ಭೇಟಿ ನೀಡಿ ಅಲ್ಲಿಂದ ಖಾದಿ ಉತ್ಪನ್ನಗಳನ್ನು ಖರೀದಿಸಿದರು. ಗಾಂಧಿಯವರ ಕನಸಿನ ಭಾರತವನ್ನು ನಿರ್ಮಿಸಲು ಮೋದಿ ಸರ್ಕಾರ ಗ್ರಾಮ ಸ್ವರಾಜ್, ಸ್ವಚ್ಛತೆ ಮತ್ತು ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವತ್ತ ಗಮನ ಹರಿಸುತ್ತಿದೆ ಎಂದು ತಿಳಿಸಿದರು.
'ಮೋದಿ ಸರ್ಕಾರದ ಅಡಿಯಲ್ಲಿ 11 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಅದು ಮಹಿಳೆಯರನ್ನು ಸಬಲೀಕರಣಗೊಳಿಸಿದೆ. ಅಂತೆಯೇ, 2014ರ ನಂತರ ಖಾದಿ ಬಳಕೆಯು ಶೇ 188 ರಷ್ಟು ಹೆಚ್ಚಾಗಿದೆ. ಆದರೆ, ಅದರ ಉತ್ಪಾದನೆಯು ಶೇ 101 ರಷ್ಟು ಮತ್ತು ಮಾರಾಟವು ಶೇ 129ರಷ್ಟು ಹೆಚ್ಚಾಗಿದೆ ಎಂದು ನಡ್ಡಾ ಹೇಳಿದರು.
'2020-21ರಲ್ಲಿ ಖಾದಿಯ ವಹಿವಾಟು 96,000 ಕೋಟಿ ರೂ. ಆಗಿದ್ದು, ಇದು ಈ ವರೆಗಿನ ಅತ್ಯಧಿಕ ವಹಿವಾಟು ಆಗಿದೆ. ಖಾದಿ ಬಳಕೆಯ ಹೆಚ್ಚಳದಿಂದಾಗಿ ಸುಮಾರು 6 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಖಾದಿಯ ಬಳಕೆಯನ್ನು ಉತ್ತೇಜಿಸಲೆಂದು ಅಕ್ಟೋಬರ್ 2 ರಿಂದ ಅಕ್ಟೋಬರ್ 7 ರವರೆಗೆ ದೇಶದಾದ್ಯಂತ ಬಿಜೆಪಿ ಕಾರ್ಯಕರ್ತರು ಖಾದಿ ಮಳಿಗೆಗಳಿಗೆ ಭೇಟಿ ನೀಡಲಿದ್ದಾರೆ' ಎಂದು ಘೋಷಿಸಿದರು.
ಖಾದಿಯ ಹೆಚ್ಚಿನ ಬಳಕೆಯು ಗ್ರಾಮ ಸ್ವರಾಜ್ ಅನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂದು ಬಿಜೆಪಿ ಅಧ್ಯಕ್ಷರು ಹೇಳಿದರು.