ಉತ್ತರಕಾಶಿ, ಡೆಹ್ರಾಡೂನ್ : ಇಲ್ಲಿನದ್ರೌಪದಿ ಕಾ ದಂಡ–2 ಶಿಖರದ ಬಳಿ ಉಂಟಾಗಿದ್ದ ಹಠಾತ್ ಹಿಮಪಾತದಿಂದಾಗಿ ಅಸುನೀಗಿದ್ದ ತರಬೇತಿನಿರತ ಪರ್ವತಾರೋಹಿಗಳ ಪೈಕಿ 10 ಮಂದಿಯ ಶವವನ್ನು ಭಾನುವಾರ ಉತ್ತರಕಾಶಿಗೆ ತರಲಾಗಿದೆ.
‘ಹಿಮಪಾತದ ಸ್ಥಳದಲ್ಲಿ ಸತತ ಆರು ದಿನಗಳಿಂದ ಶೋಧ ಹಾಗೂ ರಕ್ಷಣಾ ಕಾರ್ಯ ನಡೆಸಲಾಗಿದ್ದು, ಒಟ್ಟು 27 ಶವಗಳನ್ನು ಹೊರತೆಗೆಯಲಾಗಿದೆ. ಈ ಪೈಕಿ 21 ಮೃತದೇಹಗಳ ಗುರುತು ಪತ್ತೆಯಾಗಿದ್ದು, ಅವುಗಳನ್ನು ಸಂಬಂಧಪಟ್ಟವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಇನ್ನೂ ಇಬ್ಬರು ನಾಪತ್ತೆಯಾಗಿದ್ದಾರೆ’ ಎಂದು ನೆಹರೂ ಪರ್ವತಾರೋಹಣ ಸಂಸ್ಥೆ (ಎನ್ಐಎಂ) ತಿಳಿಸಿದೆ.
ರಾಜ್ಯದ ಇಬ್ಬರ ಶವ ಪತ್ತೆ: ಹಿಮಪಾತದಲ್ಲಿ ಕರ್ನಾಟಕದ ಇಬ್ಬರು ಮೃತಪಟ್ಟಿದ್ದು, ಅವರ ಗುರುತು ಪತ್ತೆಯಾಗಿದೆ.
‘ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಉತ್ತರಕಾಶಿಯಿಂದ ಡೆಹ್ರಾಡೂನ್ಗೆ ಕೊಂಡೊಯ್ಯಲಾಗಿದೆ. ಸೋಮವಾರ ಬೆಳಿಗ್ಗೆ ಅವುಗಳನ್ನು ಬೆಂಗಳೂರಿಗೆ ತರಲಾಗುತ್ತದೆ’ ಎಂದು ಮೂಲಗಳು ತಿಳಿಸಿವೆ.
ಕೇದಾರನಾಥ, ಬದರಿನಾಥದಲ್ಲಿ ಹಿಮಪಾತ: ಸತತ ಎರಡನೇ ದಿನವಾದ ಭಾನುವಾರ ಸಹ ಕೇದಾರನಾಥ, ಬದರಿನಾಥ ಹಾಗೂ ಹೇಮಕುಂಟ ಸಾಹೀಬ್ ಪ್ರದೇಶಗಳಲ್ಲಿ ಹಿಮಪಾತವಾಗಿದ್ದು, ಹವಾಮಾನ ಸುಧಾರಿಸುವ ತನಕ ಯಾತ್ರಿಕರು ಇಲ್ಲಿಗೆ ಭೇಟಿ ನೀಡದಿರುವುದು ಉತ್ತಮ ಎಂದು ಸರ್ಕಾರ ತಿಳಿಸಿದೆ.