ಅಹಮದಾಬಾದ್ (ಪಿಟಿಐ): ಮಹತ್ವಾಕಾಂಕ್ಷಿ ಮುಂಬೈ– ಅಹಮದಾಬಾದ್ ಬುಲೆಟ್ ರೈಲು ಯೋಜನೆಗೆ ಜಮೀನು ನೀಡಿದ್ದ ರೈತರು ಸಲ್ಲಿಸಿದ್ದ 120ಕ್ಕೂ ಹೆಚ್ಚು ಅರ್ಜಿಗಳನ್ನು ಗುಜರಾತ್ ಹೈಕೋರ್ಟ್ ವಜಾ ಮಾಡಿದೆ. ಯೋಜನೆಗೆ ತಮ್ಮ ಭೂಮಿ ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ಈ ರೈತರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಭೂಮಿ ನೀಡಿದ ರೈತರಿಗೆ ರಾಜ್ಯ ಸರ್ಕಾರ ನೀಡಿರುವ ಪರಿಹಾರ ನ್ಯಾಯಸಮ್ಮತವಾಗಿದೆ ಎಂದು ಎ.ಎಸ್.ದವೆ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.
ಇನ್ನೂ ಹೆಚ್ಚಿನ ಪರಿಹಾರ ಬೇಕಿದ್ದರೆ ಸರ್ಕಾರದ ಮೇಲೆ ರೈತರು ಒತ್ತಡ ಹೇರಬಹುದು ಎಂದು ಪೀಠ ಹೇಳಿತು.
ಗುಜರಾತ್ ಸರ್ಕಾರ 2016 ರಲ್ಲಿ ತಿದ್ದುಪಡಿ ಮಾಡಿದ ಭೂ ಸ್ವಾಧೀನ ಕಾಯಿದೆಯ ಸಿಂಧುತ್ವವನ್ನು ನ್ಯಾಯಪೀಠ ಎತ್ತಿಹಿಡಿಯಿತು. ಈ ತಿದ್ದುಪಡಿಗೆ ರಾಷ್ಟ್ರಪತಿಗಳು ಒಪ್ಪಿಗೆ ನೀಡಿದ್ದರು.