ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭೂಗತಪಾತಕಿ ಗಡೀಪಾರು ಮಾಡಿದ ಚೀನಾ

Published 23 ಮಾರ್ಚ್ 2024, 16:27 IST
Last Updated 23 ಮಾರ್ಚ್ 2024, 16:27 IST
ಅಕ್ಷರ ಗಾತ್ರ

ಮುಂಬೈ: ಭಾರತ ಮೂಲದ ಭೂಗತಪಾತಕಿ ಒಬ್ಬನನ್ನು ಚೀನಾ ಗಡೀಪಾರು ಮಾಡಿದೆ. ಆತನನ್ನು ಶುಕ್ರವಾರ ಮಧ್ಯರಾತ್ರಿ ಮುಂಬೈಗೆ ಕರೆತರಲಾಗಿದೆ.

ಇದೇ ಮೊದಲ ಬಾರಿ ಚೀನಾದಿಂದ ಗಡೀಪಾರು ಮಾಡಿದ ಪ್ರಕರಣ ನಡೆದಿದೆ.

ಭೂಗತಪಾತಕಿ ಪ್ರಸಾದ್‌ ಪೂಜಾರಿ ಅಲಿಯಾಸ್‌ ಸುಭಾಷ್‌ ವಿಠಲ್‌ ಪೂಜಾರಿ ಅಲಿಯಾಸ್‌ ಸಿದ್ಧಾರ್ಥ್‌ ಶೆಟ್ಟಿ ಮೂಲತಃ ಮುಂಬೈನ ವಿಕ್ರೊಲಿ ಉಪನಗರದ ನಿವಾಸಿ. ಹಲವು ವರ್ಷಗಳ ಹಿಂದೆಯೇ ಆತ ಭಾರತ ತೊರೆದು ಚೀನಾಕ್ಕೆ ಹೋಗಿದ್ದ. ಚೀನಾ ಮತ್ತು ಹಾಂಗ್‌ಕಾಂಗ್‌ನಲ್ಲಿ ಬಹುಕಾಲ ನೆಲೆಸಿದ್ದ ಆತ, ಪ್ರಮುಖ ಭೂಗತಪಾತಕಿಗಳಾದ ಕುಮಾರ್‌ ಪಿಳ್ಳೈ ಮತ್ತು ಛೋಟಾ ರಾಜನ್‌ ಅವರ ತಂಡಗಳ ಸದಸ್ಯನಾಗಿದ್ದ. ಅಂತರರಾಷ್ಟ್ರೀಯ ಸಿಮ್‌ಕಾರ್ಡ್‌ಗಳನ್ನು ಬಳಸಿ ಭಾರತದ ಉದ್ಯಮಿಗಳು ಮತ್ತು ಚಿತ್ರತಾರೆಗಳನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ.

ಅಂತರರಾಷ್ಟ್ರೀಯ ಕ್ರಿಮಿನಲ್‌ ಪೊಲೀಸ್‌ ಸಂಘಟನೆ (ಇಂಟರ್‌ಪೋಲ್‌) ನೀಡಿದ ಮಾಹಿತಿ ಆಧರಿಸಿ, ನಕಲಿ ಪಾಸ್‌ಪೋರ್ಟ್‌ ಹೊಂದಿರುವ ಆರೋಪದ ಮೇಲೆ ಹಾಂಗ್‌ಕಾಂಗ್‌ನ ವಿಮಾನ ನಿಲ್ದಾಣದಲ್ಲಿ ಕಳೆದವರ್ಷ ಮಾರ್ಚ್‌ನಲ್ಲಿ ಆತನನ್ನು ಬಂಧಿಸಲಾಗಿತ್ತು. ಬಂಧನದ ಬಳಿಕ ಮುಂಬೈ ಪೊಲೀಸರು ಆತನ ಗಡೀಪಾರು ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಧ್ಯರಾತ್ರಿ ಬಂದಿಳಿದ ಆತನನ್ನು, ಸದ್ಯಕ್ಕೆ ಕ್ರೈಂ ಬ್ರಾಂಚ್‌ನ ಸುಲಿಗೆ ನಿಗ್ರಹ ತಂಡದ ವಶಕ್ಕೆ ನೀಡಲಾಗಿದೆ. 

ಗುಂಡುಹಾರಿಸಿದ, ವಂಚನೆ, ಕೊಲೆಗೆ ಸಂಬಂಧಿಸಿದ ಎಂಟು ಪ್ರಕರಣಗಳಲ್ಲಿ ಪೂಜಾರಿಯ ಪಾತ್ರವಿದೆ ಎನ್ನಲಾಗಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಪೂಜಾರಿ ತಾಯಿ ಇಂದಿರಾ ಪೂಜಾರಿಯನ್ನು ಮುಂಬೈ ಪೊಲೀಸರು 2020ರಲ್ಲಿ ಬಂಧಿಸಿದ್ದರು. ಶಿವಸೇನಾ ಕಾರ್ಯಕರ್ತ ಚಂದ್ರಕಾಂತ್‌ ಜಾಧವ್ ಅವರ ಮೇಲೆ ಗುಂಡುಹಾರಿಸಿದ್ದ ಪ್ರಕರಣದಲ್ಲೂ ಪೂಜಾರಿ ಹೆಸರು ಕೇಳಿಬಂದಿತ್ತು. 

ಪೂಜಾರಿಯು ಚೀನಾ ಪ್ರಜೆಯನ್ನು ಮದುವೆಯಾಗಿದ್ದು, ದಂಪತಿಗೆ ಒಂದು ಮಗು ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT