ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್‌ಇಟಿ ಕಮಾಂಡರ್‌ ಸೇರಿ ಇಬ್ಬರು ಉಗ್ರರ ಹತ್ಯೆ, ಯೋಧ ಹುತಾತ್ಮ

ಬಾಜಿಮಾಲ್‌ನ ಅರಣ್ಯ ಪ್ರದೇಶದಲ್ಲಿ ಭದ್ರತಾಪಡೆಗಳ ಕಾರ್ಯಾಚರಣೆ
Published 23 ನವೆಂಬರ್ 2023, 16:09 IST
Last Updated 23 ನವೆಂಬರ್ 2023, 16:09 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುರುವಾರವೂ ಗುಂಡಿನ ಚಕಮಕಿ ನಡೆದಿದ್ದು, ಲಷ್ಕರ್‌–ಎ–ತಯಬಾ (ಎಲ್‌ಇಟಿ) ಕಮಾಂಡರ್‌ ಸೇರಿ ಇಬ್ಬರು ಉಗ್ರರು ಹತರಾಗಿದ್ದು, ಮತ್ತೊಬ್ಬ ಯೋಧ ಹುತಾತ್ಮರಾಗಿದ್ದಾರೆ.

ಉತ್ತರಪ್ರದೇಶದ ಅಲಿಗಢದ ಸಚಿನ್ ಲೌರ್‌ ಹುತಾತ್ಮ ಯೋಧ.

ಪಾಕಿಸ್ತಾನ ಪ್ರಜೆ ಹಾಗೂ ಎಲ್‌ಇಟಿ ಕಮಾಂಡರ್‌ ಕ್ವಾರಿ ಮತ್ತು ಆತನ ಸಹಚರನನ್ನು ಹತ್ಯೆ ಮಾಡಲಾಗಿದ್ದು, ಕಾರ್ಯಾಚರಣೆಯು ಅಂತಿಮ ಹಂತಕ್ಕೆ ತಲುಪಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದಲ್ಲಿ ತರಬೇತಿ ಪಡೆದಿದ್ದ ಕ್ವಾರಿಯನ್ನು ರಜೌರಿ ಪ್ರದೇಶದಲ್ಲಿ ಎಲ್‌ಇಟಿ ಚಟುವಟಿಕೆಗಳನ್ನು ಸಕ್ರಿಯಗೊಳಿಸುವ ಕಾರ್ಯಕ್ಕೆ ನಿಯೋಜಿಸಲಾಗಿತ್ತು ಎಂದಿವೆ.

ಒಂದು ವರ್ಷದಿಂದ ರಜೌರಿ –ಪೂಂಚ್‌ ಪ್ರದೇಶದಲ್ಲಿ ತನ್ನ ಗುಂಪಿನೊಂದಿಗೆ ಸಕ್ರಿಯನಾಗಿದ್ದ ಈತ ಡಾಂಗ್ರಿ ಹಾಗೂ ಕಂಡಿಯಲ್ಲಿ ನಡೆದ ದಾಳಿಗಳ ಸಂಚುಕೋರನಾಗಿದ್ದಾನೆ ಎಂದು ವಿವರಿಸಿವೆ.

ಕಚ್ಚಾ ಬಾಂಬ್‌ ತಯಾರಿಸುವು‌ದಲ್ಲಿ ನಿಪುಣನಾಗಿದ್ದ ಕ್ವಾರಿ, ಸ್ನೈಪರ್‌ ಕೂಡ ಆಗಿದ್ದ. ಗುಹೆಗಳಲ್ಲಿ ಅಡಗಿ ದಾಳಿ ನಡೆಸುವ ತರಬೇತಿ ಪಡೆದಿದ್ದ ಎಂದಿವೆ.

ಇನ್ನೊಬ್ಬ ಉಗ್ರನ ಗುರುತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಜಿಮಾಲ್‌ನ ಅರಣ್ಯ ಪ್ರದೇಶದಲ್ಲಿ ಬುಧವಾರ ಉಗ್ರರ ಜೊತೆಗೆ ನಡೆದ ಗುಂಡಿನ ಚಕಮಕಿಯಲ್ಲಿ  63–ರಾಷ್ಟ್ರೀಯ ರೈಫಲ್ಸ್‌ನ ಕರ್ನಾಟಕ ಮೂಲದ ಕ್ಯಾಪ್ಟನ್‌ ಎಂ.ವಿ.ಪ್ರಾಂಜಲ್‌, ಉತ್ತರಪ್ರದೇಶದ ಆಗ್ರಾದ ಕ್ಯಾಪ್ಟನ್‌ ಶುಭಂ ಗುಪ್ತಾ, ಪೂಂಚ್‌ ನಿವಾಸಿ ಹವಾಲ್ದಾರ್‌ ಅಬ್ದುಲ್‌ ಮಜೀದ್‌, ಉತ್ತರಾಖಂಡದ ನೈನಿತಾಲ್‌ನ ಲ್ಯಾನ್ಸ್‌ನಾಯಕ್‌ ಸಂಜಯ್‌ ಬಿಸ್ತ್‌ ಹುತಾತ್ಮರಾಗಿದ್ದರು.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸೇನೆ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಉಗ್ರರು ದಾಳಿ ನಡೆಸಿದ್ದರು.

ಹುತಾತ್ಮ ಕ್ಯಾಪ್ಟನ್‌ ಶುಭಂ ಗುಪ್ತಾ ಅವರ ಸಂಬಂಧಿಕರ ರೋದನ –ಪಿಟಿಐ ಚಿತ್ರ
ಹುತಾತ್ಮ ಕ್ಯಾಪ್ಟನ್‌ ಶುಭಂ ಗುಪ್ತಾ ಅವರ ಸಂಬಂಧಿಕರ ರೋದನ –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT