ತೂತ್ತುಕುಡಿ: ತಮಿಳುನಾಡಿನಲ್ಲಿ ಇಸ್ರೊದ ನೂತನ ರಾಕೆಟ್ ಉಡ್ಡಯನ ಕೇಂದ್ರಕ್ಕೆ ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ನೀಡಿದ್ದ ಜಾಹೀರಾತಿನಲ್ಲಿ ಚೀನಾ ಬಾವುಟ ಮುದ್ರಿತವಾಗಿರುವುದಕ್ಕೆ ವಿನ್ಯಾಸಕಾರನಿಂದಾದ ಲೋಪವೇ ಕಾರಣ ಎಂದು ಡಿಎಂಕೆ ನಾಯಕಿ ಹಾಗೂ ಮೀನುಗಾರಿಕೆ ಸಚಿವೆ ಅನಿತಾ ರಾಧಾಕೃಷ್ಣನ್ ಗುರುವಾರ ಹೇಳಿದ್ದಾರೆ.
ಜಾಹೀರಾತಿನಲ್ಲಿ ರಾಕೆಟ್ನ ತುದಿಯಲ್ಲಿ ಚೀನಾ ಬಾವುಟ ಮುದ್ರಿತವಾಗಿರುವುದು ವಿವಾದಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ಡಿಎಂಕೆ ವಿರುದ್ಧ ಬಿಜೆಪಿ ರಾಜ್ಯ ಘಟಕ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ವಾಗ್ದಾಳಿ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಸಚಿವೆ ಅನಿತಾ, ‘ಇದು ವಿನ್ಯಾಸಕಾರನಿಂದ ಆಗಿರುವ ಲೋಪವೇ ಹೊರತು, ಡಿಎಂಕೆ ಪಕ್ಷಕ್ಕೆ ಇತರ ಯಾವುದೇ ಉದ್ದೇಶ ಇರಲಿಲ್ಲ’ ಎಂದಿದ್ದಾರೆ.