ನವದೆಹಲಿ: ಪಟಾಕಿಗಳಿಗೆ ಹೋಲಿಸಿದರೆ ವಾಹನಗಳಿಂದಲೇ ಹೆಚ್ಚು ಪರಿಸರ ಮಾಲಿನ್ಯವಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಪಟಾಕಿಯಿಂದ ಮಾಲಿನ್ಯ ಹೆಚ್ಚುತ್ತಿರುವುದರಿಂದ ದೇಶದಾದ್ಯಂತ ಪಟಾಕಿ ಸುಡುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಕೋರ್ಟ್ ಮಂಗಳವಾರ ವಿಚಾರಣೆ ನಡೆಸಿತು.
ಪರಿಸರ ಮಲಿನವಾಗಲು ಪಟಾಕಿಯೇ ಕಾರಣ ಎಂದು ಗೂಬೆ ಕೂರಿಸಲಾಗುತ್ತಿದೆ. ಇದರಿಂದ ಪಟಾಕಿ ತಯಾರಿಕೆ ಉದ್ಯಮದಲ್ಲಿ ತೊಡಗಿರುವ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ದೇಶದಲ್ಲಿ ನಿರುದ್ಯೋಗ ಹೆಚ್ಚಾಗುವುದು ನ್ಯಾಯಾಲಯಕ್ಕೆ ಬೇಕಾಗಿಲ್ಲ ಎಂದು ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ, ಎಸ್.ಎ. ನಜೀರ್ ಅವರ ದ್ವಿಸದಸ್ಯ ಪೀಠವು ಕೇಂದ್ರ ಸರ್ಕಾರಕ್ಕೆ ಸ್ಪಷ್ಟಪಡಿಸಿದೆ.
‘ಪಟಾಕಿ ಮತ್ತು ವಾಹನಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯದ ಬಗ್ಗೆ ತೌಲನಿಕ ಅಧ್ಯಯನ ಏನಾದರೂ ನಡೆದಿದೆಯೇ’ ಎಂದು ಕೋರ್ಟ್, ಕೇಂದ್ರ ಸರ್ಕಾರದ ಪ್ರತಿನಿಧಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎ.ಎನ್.ಎಸ್ ನಾಡಕರ್ಣಿ ಅವರನ್ನು ಪ್ರಶ್ನಿಸಿತು.