ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
Explainer: ಚುನಾವಣಾ ಮಾದರಿ ನೀತಿ ಸಂಹಿತೆ– ಮೊದಲು ಜಾರಿಯಾಗಿದ್ದು ಇಲ್ಲಿ...
Explainer: ಚುನಾವಣಾ ಮಾದರಿ ನೀತಿ ಸಂಹಿತೆ– ಮೊದಲು ಜಾರಿಯಾಗಿದ್ದು ಇಲ್ಲಿ...
Published 15 ಮಾರ್ಚ್ 2024, 13:16 IST
Last Updated 15 ಮಾರ್ಚ್ 2024, 13:16 IST
ಅಕ್ಷರ ಗಾತ್ರ
ದೇಶವು 18ನೇ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದೆ. ಈ ಹಿಂದೆ 2019ರಲ್ಲಿ ಚುನಾವಣೆ ನಡೆದಿತ್ತು. ನಾಳೆ (ಮಾ.16) ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದೆ. 

ನವದೆಹಲಿ: ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದ ದಿನದಿಂದ ಜಾರಿಗೆ ಬರುವುದು ಮಾದರಿ ನೀತಿ ಸಂಹಿತೆ. 1960ರಲ್ಲಿ ರಾಜಕೀಯ ಪಕ್ಷಗಳಿಗಷ್ಟೇ ಸೀಮಿತವಾಗಿ ಕೇರಳ ವಿಧಾನಸಭಾ ಚುನಾವಣೆ ವೇಳೆ ಈ ನೀತಿ ಸಂಹಿತೆಯನ್ನು ಮೊದಲ ಬಾರಿಗೆ ಪರಿಚಯಿಸಲಾಗಿತ್ತು, ಹೀಗಾಗಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಕಳೆದ 64 ವರ್ಷಗಳಿಂದ ಈ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ.

ಪ್ರಚಾರ, ಕ್ರಮಬದ್ಧವಾದ ಮತದಾನ ಮತ್ತು ಎಣಿಕೆ, ಸ್ವಚ್ಛ ಮತ್ತು ಶಾಂತಿಯುತ ವಾತಾವರಣವನ್ನು ಕಾಪಾಡುವುದು ಮತ್ತು ಅಧಿಕಾರದಲ್ಲಿರುವ ಪಕ್ಷದ ಹಸ್ತಕ್ಷೇಪ ಮತ್ತು ಆರ್ಥಿಕ ವ್ಯವಹಾರ ದುರುಪಯೋಗವನ್ನು ಪರಿಶೀಲಿಸುವುದು ಇದರ ಉದ್ದೇಶವಾಗಿದೆ. ಇದು ಯಾವುದೇ ಶಾಸನಬದ್ಧ ಬೆಂಬಲವನ್ನು ಪಡೆಯುವುದಿಲ್ಲ.

ನೀತಿ ಸಂಹಿತೆ ಜಾರಿ ವಿಚಾರವನ್ನು ಸುಪ್ರೀಂ ಕೋರ್ಟ್‌ ಕೂಡ ಹಲವು ಬಾರಿ ಎತ್ತಿಹಿಡಿದಿದೆ. ಅಲ್ಲದೆ ಈ ವೇಳೆಯಲ್ಲಿ ಯಾವ ಪಕ್ಷವಾದರೂ ನೀತಿ ಸಂಹಿತಿ ಉಲ್ಲಂಘನೆ ಮಾಡಿದರೆ ಅಂತಹ ಸಂದರ್ಭಗಳಲ್ಲಿ ತನಿಖೆ ಮಾಡುವ ಮತ್ತು ಶಿಕ್ಷೆ ನೀಡುವ ಅಧಿಕಾರ ಚುನಾವಣಾ ಆಯೋಗಕ್ಕಿರುತ್ತದೆ.

ಮಾದರಿ ನೀತಿ ಸಂಹಿತೆಯು ಮತದಾನದ ದಿನಾಂಕ ಘೋಷಣೆಯಾದ ದಿನದಿಂದ ಚುನಾವಣಾ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯುವವರೆಗೂ ಅಸ್ತಿತ್ವದಲ್ಲಿ ಇರುತ್ತದೆ.

ಭಾರತದ ಚುನಾವಣಾ ಆಯೋಗ ಹೊರತಂದಿರುವ Leap of Faith ಎನ್ನುವ ಪುಸ್ತಕದಲ್ಲಿ ಭಾರತದಲ್ಲಿ ನಡೆದ ಚುನಾವಣೆಗಳ ಪಯಣವನ್ನು ವಿವರಿಸಲಾಗಿದೆ. ಈ ಪುಸ್ತಕದಲ್ಲಿ ಈಗಿರುವ ಮಾದರಿ ನೀತಿ ಸಂಹಿತೆ ಮಾದರಿ ಆರು ದಶಕಗಳ ಹಿಂದೆಯೇ ರೂಪಿತವಾಗಿದೆ ಎನ್ನುವುದನ್ನು ಉಲ್ಲೇಖಿಸಲಾಗಿದೆ.

1968 ಸೆ.26 ರಂದು ನಡೆದ ಅವಧಿ ಪೂರ್ವ ಚುನಾವಣೆ ವೇಳೆ ಭಾರತ ಚುನಾವಣಾ ಆಯೋಗ ಮೊದಲ ಬಾರಿ ನೀತಿ ಸಂಹಿತೆಯನ್ನು ಜಾರಿಗೆ ತಂದಿತ್ತು. ಆಗ ಇದರ ಹೆಸರನ್ನು ‘ಕನಿಷ್ಠ ನೀತಿ ಸಂಹಿತೆ’ ಎಂದು ಇರಿಸಲಾಗಿತ್ತು. ಬಳಿಕ 1979, 1982, 1991 ಮತ್ತು 2013ರ ಅವಧಿಯಲ್ಲಿ ಸಂಹಿತೆಯನ್ನು ಪರಿಷ್ಕರಿಸಿ ‘ಮಾದರಿ ನೀತಿ ಸಂಹಿತೆ’ ಎಂದು ಮಾಡಲಾಗಿದೆ.

2013 ರಲ್ಲಿ ಸಂಸದೀಯ ಸಮಿತಿಯು ಮಾದರಿ ನೀತಿ ಸಂಹಿತೆಗೆ ಕಾನೂನು ಬೆಂಬಲವನ್ನು ನೀಡಬೇಕೆಂದು ಶಿಫಾರಸು ಮಾಡಿತು, ಇದರಿಂದ ಚುನಾವಣಾ ಆಯೋಗವು ತನ್ನ ಅಧಿಕಾರವನ್ನು ಚಲಾಯಿಸಲು ಯಾವುದೇ ನಿರ್ಬಂಧಗಳಿರುವುದಿಲ್ಲ, ಅದು ಸಹಜ ಪ್ರಕ್ರಿಯೆಯಾಗಲಿದೆ ಎಂದು ಹೇಳಿತ್ತು.

ಇದರ ಜತೆಗೆ ಚುನಾವಣೆಯ ಅಧಿಸೂಚನೆಯ ದಿನಾಂಕದಿಂದ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಬೇಕೇ ಹೊರತು ಚುನಾವಣೆ ಘೋಷಣೆಯಾದ ದಿನಾಂಕದಿಂದಲ್ಲ ಎಂದು ಸಮಿತಿಯು ಶಿಫಾರಸು ಮಾಡಿತ್ತು. ಅಲ್ಲದೆ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಯನ್ನು ಹೆಚ್ಚು ವಾಸ್ತವಿಕವಾಗಿರುವಂತೆ ಪರಿಷ್ಕರಿಸಬೇಕು, ನ್ಯಾಯಾಲಯಗಳು 12 ತಿಂಗಳೊಳಗೆ ಚುನಾವಣಾ ವಿವಾದಗಳನ್ನು ವಿಲೇವಾರಿ ಮಾಡಿ, ಸ್ವತಂತ್ರ ಸಂಸದರು ಚುನಾವಣೆಯ ಆರು ತಿಂಗಳೊಳಗೆ ಯಾವುದೇ ರಾಜಕೀಯ ಪಕ್ಷವನ್ನು ಸೇರಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿತ್ತು.

ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌.ವೈ. ಖುರೇಷಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಮಾದರಿ ನೀತಿ ಸಂಹಿತೆಯನ್ನು  ಕಾನೂನುಬದ್ಧಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು, ಅದನ್ನು ಉಲ್ಲಂಘಿಸುವ ರಾಜಕಾರಣಿಗಳ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಸೂಚಿಸಿದ್ದರು.

ಚುನಾವಣಾ ಆಯೋಗ ಮತ್ತು ಮಾದರಿ ನೀತಿ ಸಂಹಿತೆಯ ಪ್ರಕಾರ ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರದಲ್ಲಿರುವವರು ಅಧಿಕೃತ ಸ್ಥಾನವನ್ನು ಬಳಸುವಂತಿಲ್ಲ, ಸರ್ಕಾರ ಮತ್ತು ಸಚಿವರು ಯಾವುದೇ ರೂಪದಲ್ಲಿ ಅನುದಾನವನ್ನು ಘೋಷಣೆ ಮಾಡುವಂತಿಲ್ಲ. ಜತೆಗೆ ಮತದಾರರನ್ನು ಸೆಳೆಯಲು ಯಾವುದೇ ಹೊಸ ಯೋಜನೆಯನ್ನು ಘೋಷಿಸುವಂತಿಲ್ಲ ಎಂದು ಹೇಳಲಾಗಿದೆ.

ಈಗಿರುವ ಲೋಕಸಭೆಯ ಅವಧಿ ಜೂನ್‌ 16ರಂದು ಕೊನೆಗೊಳ್ಳಲಿದೆ. ಹೀಗಾಗಿ ಅಷ್ಟರೊಳಗೆ ಹೊಸ ಸರ್ಕಾರ ರಚನೆಯಾಗಬೇಕಿದೆ.

2019ರಲ್ಲಿ ಮಾರ್ಚ್‌ 10 ರಂದು ಚುನಾವಣಾ ದಿನಾಂಕ ಘೋಷಣೆ ಮಾಡಲಾಗಿತ್ತು. ಏಳು ಹಂತಗಳಲ್ಲಿ ನಡೆದ ಚುನಾವಣೆ ಏಪ್ರಿಲ್‌ 11 ರಂದು ಆರಂಭವಾಗಿತ್ತು. ಹಾಗೂ ಮೇ 23ರಂದು ಮತ ಎಣಿಕೆ ನಡೆದಿತ್ತು. ಆಗ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಗೆದ್ದು ಸರ್ಕಾರ ರಚನೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT