ನವದೆಹಲಿ: ‘ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹರಿಯಾಣದಲ್ಲಿ ಕ್ರಮವಾಗಿ ಜಮೀನು ಖರೀದಿಸಿದ್ದಾರೆ’ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.
ದೆಹಲಿಯಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಈ ಆರೋಪ ಮಾಡಿದ್ದಾರೆ.
‘ರಾಹುಲ್ ಮತ್ತು ಪ್ರಿಯಾಂಕಾ ಅವರು 2018ರಲ್ಲಿ ಶಸ್ತ್ರಾಸ್ತ್ರ ದಲ್ಲಾಳಿ ಎಚ್.ಎಲ್.ಪಾಹ್ವಾ ಮೂಲಕ ಹರಿಯಾಣದಲ್ಲಿ ಪ್ರತ್ಯೇಕವಾಗಿ ಜಮೀನು ಖರೀದಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತನಿಖಾ ಸಂಸ್ಥೆಗಳು ಪತ್ತೆ ಮಾಡಿವೆ. ಪ್ರಿಯಾಂಕಾ ಅವರ ಪತಿ ರಾಬರ್ಟ್ ವಾದ್ರಾ ಅವರ ಸಹಾಯಕ ಸಂಜಯ್ ಭಂಡಾರಿ ಮತ್ತು ಸಿ.ಸಿ.ಥಾಂಪಿ ನಡುವೆ ಸಂಪರ್ಕವಿರುವುದುಎಲ್ಲರಿಗೂ ತಿಳಿದೇ ಇದೆ. ಥಾಂಪಿ ಮತ್ತು ಪಾಹ್ವಾ ನಡುವೆಯೂ ಸಂಪರ್ಕವಿದೆ’ ಎಂದು ಸ್ಮೃತಿ ಆರೋಪಿಸಿದ್ದಾರೆ.
ಕಾಂಗ್ರೆಸ್ ತಿರುಗೇಟು:ಈ ಆರೋಪಗಳಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
‘ಸ್ಮೃತಿ ಇರಾನಿ ಅವರ ಆರೋಪಗಳಿಗೆ ಆಧಾರಗಳಿಲ್ಲ. ರಾಹುಲ್ ಗಾಂಧಿ ವಿರುದ್ಧ ಹಗೆ ತೀರಿಸಿಕೊಳ್ಳಬೇಕು ಎಂಬ ಏಕೈಕ ಉದ್ದೇಶದಿಂದ ಸ್ಮೃತಿ ಇರಾನಿ ಮತ್ತವರ ಗುರು ನರೇಂದ್ರ ಮೋದಿ ವಾಸ್ತವಗಳಿಗೆ ಕುರುಡಾಗಿದ್ದಾರೆ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಕಿಡಿಕಾರಿದ್ದಾರೆ.
ರಾಹುಲ್ಗೆ ರಕ್ಷಣಾ ‘ಡೀಲ್’ಗಳಲ್ಲಿ ಆಸಕ್ತಿ ಏಕೆಂದು ದೇಶದ ಜನರಿಗೆ ಈಗ ಅರ್ಥವಾಗುತ್ತಿದೆ. ಅದು ದೇಶದ ಹಿತಾಸಕ್ತಿಗಿಂತ, ಕುಟುಂಬದ ಹಿತಾಸಕ್ತಿ ಅಷ್ಟೆ -ಸ್ಮೃತಿ ಇರಾನಿ, ಕೇಂದ್ರ ಸಚಿವೆ
ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಬಿಜೆಪಿಯವರು ರಾಹುಲ್ ಮೇಲೆ ಆರೋಪ ಮಾಡುತ್ತಿ<br/>ದ್ದಾರೆ. ಆರೋಪ ನಿಜವೇ ಆಗಿದ್ದಿದ್ದರೆ ಸರ್ಕಾರ ಕ್ರಮವನ್ನೇಕೆ ತೆಗೆದುಕೊಂಡಿಲ್ಲ -ರಣದೀಪ್ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ