ಲೋಕಸಭೆಯಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಫೆಬ್ರುವರಿ 7ರಂದು ಲಿಖಿತ ಉತ್ತರ ನೀಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ‘ದೇಶದಲ್ಲಿ 2019ರಲ್ಲಿ 5,957, 2020ರಲ್ಲಿ 5,579, 2021ರಲ್ಲಿ 5,318 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಮೂರು ವರ್ಷಗಳಲ್ಲಿ 3,573 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನ್ನದಾತರ ಆತ್ಮಹತ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ (ಎನ್ಸಿಆರ್ಬಿ) ಈ ಸಂಬಂಧ ಗೃಹ ಇಲಾಖೆಗೆ ವರದಿ ನೀಡಿದೆ. ಯಾವ ಕಾರಣಕ್ಕೆ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಪ್ರತ್ಯೇಕ ಕಾರಣಗಳನ್ನು ನೀಡಿಲ್ಲ’ ಎಂದು ಹೇಳಿದ್ದರು.