ಲಖನೌ: ಮುಂದಿನ ಮೂರು ತಿಂಗಳಲ್ಲಿ ಒಂದು ಕೋಟಿ ಜನರನ್ನು ಹೊಸ ಸದಸ್ಯರನ್ನಾಗಿ ಮಾಡಿಕೊಳ್ಳಲಿದ್ದು, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ರಾಷ್ಟ್ರೀಯ ಕಿಸಾನ್ ಮಂಚ್ ಬುಧವಾರ ಹೇಳಿದೆ.
ಲೋಕಸಭೆ ಮತ್ತು ರಾಜ್ಯಸಭೆಗಳಿಗೆ ರೈತರೇ ಪ್ರವೇಶಿಸಿದಾಗ ಮಾತ್ರ ರೈತರು ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಕಿಸಾನ್ ಮಂಚ್ ರಾಷ್ಟ್ರೀಯ ಅಧ್ಯಕ್ಷ ಶೇಖರ್ ದೀಕ್ಷಿತ್ ಅವರು ಸಂಘಟನೆಯ ಉತ್ತರ ಪ್ರದೇಶ ಘಟಕದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು.
ಸಂಸ್ಥೆಯ ಸದಸ್ಯತ್ವಕ್ಕೆ ಚಾಲನೆ ಆರಂಭಿಸಿದೆ ಮತ್ತು ಮುಂದಿನ ಮೂರು ತಿಂಗಳಲ್ಲಿ ಒಂದು ಕೋಟಿ ಹೊಸ ಸದಸ್ಯರನ್ನು ಮಾಡುವ ಯೋಜನೆ ಇದೆ. 2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಎಲ್ಲ 403 ವಿಧಾನಸಭಾ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಕಿಸಾನ್ ಮಂಚ್ ಅಭ್ಯರ್ಥಿಗಳನ್ನು ಚುನಾವಣಾ ಅಖಾಡಕ್ಕಿಳಿಸಲಿದೆ' ಎಂದು ದೀಕ್ಷಿತ್ ಹೇಳಿದ್ದಾರೆ.
ಸದ್ಯದ ಬಿಜೆಪಿ ಸರ್ಕಾರ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಮತ್ತು ಬಂಡವಾಳಶಾಹಿಗಳ ಅನುಕೂಲಕ್ಕಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ದೂರಿದರು.
'ರೈತ ವಿರೋಧಿ ಸರ್ಕಾರಗಳನ್ನು ಕೆಳಗಿಳಿಸಿ ಬೇರೊಂದನ್ನು ಅಧಿಕಾರಕ್ಕೇರಿಸುವ ಸಮಯ ಬಂದಿದೆ, ಇದರಲ್ಲಿ ಅಧಿಕಾರದ ಸಂಪೂರ್ಣ ನಿಯಂತ್ರಣವು ರೈತರ ಕೈಯಲ್ಲಿರುತ್ತದೆ. ರೈತರು ಚುನಾವಣಾ ರಂಗಕ್ಕೆ ಕಾಲಿಡಬೇಕು ಮತ್ತು ರಾಜಕೀಯ ಪಕ್ಷಗಳಿಗೆ ತಮ್ಮ ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸಬೇಕು' ಎಂದು ಹೇಳಿದರು.