ನವದೆಹಲಿ: ಜಾಗತಿಕ ಪರಿಸ್ಥಿತಿಗಳು ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿವೆ. ಇವೇ ವಾಸ್ತವಾಂಶಗಳು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಮಂಗಳವಾರ ಬೆಲೆ ಏರಿಕೆ ಕುರಿತಾದ ಅಲ್ಪಾವಧಿ ಚರ್ಚೆಯ ಸಂದರ್ಭ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರತಿಕ್ರಿಯಿಸಿದರು. ಭಾರತೀಯ ಆರ್ಥಿಕತೆಯ ಮೂಲಾಧಾರಗಳು ಗಟ್ಟಿಯಾಗಿವೆ. ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಜೊತೆಯಾಗಿ ಹಣದುಬ್ಬರವನ್ನು ಶೇಕಡಾ 7ಕ್ಕಿಂತ ಕೆಳಗೆ ತರಲು ಮತ್ತು ಶೇಕಡಾ 6ಕ್ಕಿಂತಲೂ ಕೆಳಗಿಳಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಭಾರತದ ಆರ್ಥಿಕತೆಯು, ಕೇವಲ ಸಮಾನ ರಾಷ್ಟ್ರಗಳ ಜೊತೆಗೆ ಮಾತ್ರವಲ್ಲ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಜೊತೆಗೆ ಹೋಲಿಸಿದರೂ ಖಂಡಿತವಾಗಿಯೂ ತುಂಬ ಉತ್ತಮ ಸ್ಥಿತಿಯಲ್ಲಿದೆ ಎಂದು ಸಮರ್ಥಿಸಿಕೊಂಡರು.
ಕೇಂದ್ರ ಸರ್ಕಾರವು ಬಡವರಿಗಾಗಿ ಅಲ್ಲ, ಕೇವಲ ಅಂಬಾನಿ ಮತ್ತು ಅದಾನಿಗಳಿಗಾಗಿ ಕೆಲಸ ಮಾಡುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ನಿರ್ಮಲಾ, ಬೆಲೆ ಏರಿಕೆ ಕುರಿತಾದ ಪ್ರಮುಖ ಚರ್ಚೆಯನ್ನು ಕೇವಲ ರಾಜಕೀಯಗೊಳಿಸಲು ಪ್ರಯತ್ನಿಸುತ್ತಿವೆ ಎಂದು ದೂರಿದ್ದಾರೆ.