ಶಿಮ್ಲಾ, (ಪಿಟಿಐ): ಹಿಮಾಚಲ ಪ್ರದೇಶದ ಸೋಲನ್ ನಗರದ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ಸುಗಂಧದ್ರವ್ಯ ತಯಾರಿಕಾ ಘಟಕವೊಂದರಲ್ಲಿ ಶುಕ್ರವಾರ ಭಾರಿ ಅಗ್ನಿ ಅವಘಡ ಸಂಭವಿಸಿದೆ. ದುರಂತದಲ್ಲಿ ಮೃತಪಟ್ಟವರ ಸಂಖ್ಯೆಯು ಶನಿವಾರ 5ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಎನ್.ಆರ್. ಆರೋಮಾಸ್ ಸಂಸ್ಥೆಯ ತಯಾರಿಕಾ ಘಟಕದಲ್ಲಿ ನಡೆದ ಅವಘಡದಲ್ಲಿ 31 ಜನರು ಗಾಯಗೊಂಡಿದ್ದು, ಕಾಣೆಯಾಗಿರುವ ಒಂಬತ್ತು ಜನರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಸೋಲನ್ನ ಉಪ ಆಯುಕ್ತರು ಹೇಳಿದರು.
ದಹನಕಾರಿ ವಸ್ತುಗಳನ್ನು ಸುಗಂಧದ್ರವ್ಯ ತಯಾರಿಕೆಗೆ ಬಳಸಲಾಗುತ್ತದೆ. ಹೀಗಾಗಿ ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಇನ್ನೂ ಪ್ರಯತ್ನ ನಡೆಸಿದ್ದಾರೆ ಎಂದರು.
ಸಂಸ್ಥೆಯ ಮುಖ್ಯಸ್ಥ ಚಂದ್ರಶೇಖರ್ ಅವರನ್ನು ಬಂಧಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 285 (ನಿರ್ಲಕ್ಷ್ಯ), 335 (ಪ್ರಣಾಪಾಯ ಉಂಟುಮಾಡುವ), 337 (ಭಾದೆ ಉಂಟುಮಾಡುವ ಮತ್ತು ಕೊಲೆಯಲ್ಲದ ಶಿಕ್ಷಾರ್ಹ ನರಹತ್ಯೆ) ಅಡಿ ಎಫ್ಐಆರ್ ದಾಖಲಿಸಲಾಗಿದೆ ಎಂದಿದ್ದಾರೆ.
ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂದು ತಿಳಿದುಬಂದಿಲ್ಲ. ಮ್ಯಾಜಿಸ್ಟೆರಿಯಲ್ ತನಿಖೆಗೆ ಆದೇಶಿಸಲಾಗಿದೆ. ಮೃತರ ಕುಟುಂಬಗಳಿಗೆ ಮತ್ತು ಗಾಯಗೊಂಡವರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.