ಬಾಲಸೋರ್, ಒಡಿಶಾ (ಪಿಟಿಐ): ಕಡಿಮೆ ವ್ಯಾಪ್ತಿಯ ಮೇಲ್ಮೈ ವಾಯು ದಾಳಿಯ ಸ್ವದೇಶಿ ತಂತ್ರಜ್ಞಾನದ ಕ್ಷಿಪಣಿಯ (ವಿಎಲ್–ಎಸ್ಆರ್ಎಸ್ಎಎಂ) ಪರೀಕ್ಷೆ ಒಡಿಶಾದ ಕರಾವಳಿಯ ಚಾಂಡಿಪುರದ ಸಮಗ್ರ ಪರೀಕ್ಷಾ ಕೇಂದ್ರದಲ್ಲಿ(ಐಟಿಆರ್) ಮಂಗಳವಾರ ಯಶಸ್ವಿಯಾಗಿ ನಡೆಯಿತು.
ವಿಎಲ್–ಎಸ್ಆರ್ಎಸ್ಎಎಂ(ವರ್ಟಿಕಲ್ ಲಾಂಚ್ ಶಾರ್ಟ್ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ ಕ್ಷಿಪಣಿ) ಕ್ಷಿಪಣಿ ವ್ಯವಸ್ಥೆಯ ಪರೀಕ್ಷೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮತ್ತು ಭಾರತೀಯ ನೌಕಾಪಡೆ ಜಂಟಿಯಾಗಿ ನಡೆಸಿದವು.
ನೌಕಾಪಡೆಯ ಹಡಗಿನಿಂದ ಉಡಾಯಿಸಿದ ಈ ಕ್ಷಿಪಣಿಯು ಮಾನವ ರಹಿತ ಅತಿ ವೇಗದ ವೈಮಾನಿಕ ಗುರಿಯನ್ನು ಯಶಸ್ವಿಯಾಗಿ ಭೇದಿಸಿತು. ಈ ಕ್ಷಿಪಣಿ ವ್ಯವಸ್ಥೆಯನ್ನು ಡಿಆರ್ಡಿಒ ದೇಶೀಯವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರೇಡಿಯೊ ತರಾಂಗಂತರ ಅನ್ವೇಷಕ ಮತ್ತು ಅತ್ಯಂತ ಹೆಚ್ಚುನಿಖರವಾಗಿ ಗುರಿ ಪತ್ತೆಹಚ್ಚುವ ಉಪಕರಣಗಳನ್ನು ಈ ಕ್ಷಿಪಣಿ ಒಳಗೊಂಡಿದೆ.
ಡಿಆರ್ಡಿಒ ಮತ್ತು ಭಾರತೀಯ ನೌಕಾಪಡೆಯನ್ನು ಪ್ರಶಂಸಿಸಿರುವರಕ್ಷಣಾ ಸಚಿವ ರಾಜನಾಥ್ ಸಿಂಗ್,ಕ್ಷಿಪಣಿಯ ಯಶಸ್ವಿ ಪ್ರಯೋಗವು ದೇಶದ ನೌಕಾಪಡೆಯ ಬಲವನ್ನು ದ್ವಿಗುಣಗೊಳಿಸಿದೆ ಎಂದರು.
ಡಿಆರ್ಡಿಒ ಅಧ್ಯಕ್ಷ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಜಿ.ಸತೀಶ್ ರೆಡ್ಡಿ, ಈ ಕ್ಷಿಪಣಿಯ ಯಶಸ್ವಿ ಪ್ರಯೋಗವು ಶಸ್ತ್ರಾಸ್ತ್ರ ವ್ಯವಸ್ಥೆಯ ಪರಿಣಾಮಕಾರಿತ್ವ ಸಾಬೀತುಪಡಿಸಿದೆ ಎಂದರು.
ಸಾಗರ ಮತ್ತು ವಾಯು ಪ್ರದೇಶದಲ್ಲಿ ತೀರಾ ಹತ್ತಿರದಲ್ಲಿ ಎದುರಾಗುವ ವೈಮಾನಿಕ ದಾಳಿಯ ಗುರಿಗಳನ್ನು ಈ ಕ್ಷಿಪಣಿ ನಿಷ್ಕ್ರಿಯಗೊಳಿಸುತ್ತದೆ. ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಇದು ಮತ್ತಷ್ಟು ಬಲಪಡಿಸುತ್ತದೆ ಎಂದು ರೆಡ್ಡಿ ಹೇಳಿದರು.