ಶಿಮ್ಲಾ: ‘ಮಹಾದೇವ್ ಆ್ಯಪ್ ಹಗರಣದ ಮೂಲಕ ಪಡೆದ ಹಣವನ್ನು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಬಳಸಲಾಗಿತ್ತು’ ಎಂಬ ಬಿಜೆಪಿ ಮುಖಂಡ ಜೈರಾಮ್ ಠಾಕೂರ್ ಅವರ ಹೇಳಿಕೆ ಖಂಡಿಸಿರುವ ಸಚಿವ ವಿಕ್ರಮಾದಿತ್ಯ ಸಿಂಗ್, ‘ಇಂತಹ ಆಧಾರ ರಹಿತ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಲಿ’ ಎಂದರು.
ಮಹಾದೇವ್ ಆ್ಯಪ್ ಹಗರಣದ ಮೂಲಕ ಪಡೆದ ಹಣವನ್ನು ಛತ್ತೀಸಗಢದ ನಿರ್ಗಮಿತ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು 2022ರಲ್ಲಿ ನಡೆದ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಪ್ರಚಾರಕ್ಕೆ ನೀಡಿದ್ದರು ಎಂಬ ಆರೋಪಗಳಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಠಾಕೂರ್ ಸೋಮವಾರ ಆರೋಪಿಸಿದ್ದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಕ್ರಮಾದಿತ್ಯ ಸಿಂಗ್, ‘ಜಾರಿ ನಿರ್ದೇಶನಾಲಯ(ಇ.ಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ಎರಡೂ ಕೇಂದ್ರ ಸರ್ಕಾರದ ಅಧೀನದಲ್ಲಿರುವುದರಿಂದ ಅಂತಹದ್ದೇನಾದರೂ ಅನುಮಾನಗಳಿದ್ದರೆ ಅವರು(ಬಿಜೆಪಿ) ತನಿಖೆ ನಡೆಸಬಹುದು’ ಎಂದು ಹೇಳಿದರು.
‘ವರ್ಷದ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಜನರು ಏಕೆ ಬೆಂಬಲ ನೀಡಲಿಲ್ಲ ಎಂದು ಠಾಕೂರ್ ಮೊದಲು ಯೋಚಿಸಲಿ’ ಎಂದು ಸಲಹೆ ನೀಡಿದರು.