ಜಮ್ಷೆಡ್ಪುರ (ಪಿಟಿಐ): ‘ಜಮ್ಷೆಡ್ಪುರದಲ್ಲಿ ಈಚೆಗೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಜಮ್ಷೆಡ್ಪುರ ಮಹಾನಗರ ಸಮಿತಿಯ ಉಪಾಧ್ಯಕ್ಷ ಸುಧಾಂಶು ಓಝಾ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
‘ಓಝಾ ಅವರನ್ನು ಮಂಗಳವಾರ ರಾತ್ರಿ ಬಂಧಿಸಲಾಗಿದೆ. ಶಾಸ್ತ್ರಿ ನಗರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಇದುವರೆಗೆ ಬಿಜೆಪಿ ರಾಜ್ಯ ಘಟಕದ ಮುಖಂಡ ಅಭಯ್ ಸಿಂಗ್ ಸೇರಿ ಒಟ್ಟು 70 ಮಂದಿಯನ್ನು ಬಂಧಿಸಲಾಗಿದೆ’ ಎಂದು ಅವರು ಹೇಳಿದರು.
ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಂದನ್ ಚೌಬೆ ಎಂಬ ವಕೀಲರೊಬ್ಬರ ಕೈಗೆ ಕೋಳ ಹಾಕಿ ಮಂಗಳವಾರ ರಾತ್ರಿ ಬಂಧಿಸಿರುವುದನ್ನು ವಿರೋಧಿಸಿ ಬುಧವಾರ ಪ್ರತಿಭಟನೆ ನಡೆಸಿದ ವಕೀಲರು, ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದರು.
‘ಚೌಬೆ ಅವರ ಕೈಗೆ ಕೋಳ ಹಾಕಿದ್ದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. 24 ಗಂಟೆಗಳ ಒಳಗಾಗಿ ತಪ್ಪೆಸಗಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಾಳೆಯೂ ನಾವು ಪ್ರತಿಭಟನೆ ಮುಂದುವರಿಸುತ್ತೇವೆ’ ಎಂದು ಜಮ್ಷೆಡ್ಪುರ ಬಾರ್ ಅಸೋಸಿಯೇಶನ್ನ ಅಡ್–ಹಾಕ್ ಸಮಿತಿ ಮುಖ್ಯಸ್ಥ ಅಜಿತ್ ಅಂಬಾಸ್ತಾ ಹೇಳಿದ್ದಾರೆ.