ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಹತ್ಯೆ ಮಾದರಿಯಲ್ಲಿ ಜೆಎನ್‌ಯುನ ಉಮರ್‌ ಮೇಲೆ ಗುಂಡಿನ ದಾಳಿ, ಪಾರು

Last Updated 13 ಆಗಸ್ಟ್ 2018, 12:24 IST
ಅಕ್ಷರ ಗಾತ್ರ

ನವದೆಹಲಿ:ಗೌರಿ ಲಂಕೇಶ್‌ ಹತ್ಯೆ ಮಾದರಿಯಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮುಖಂಡ ಉಮರ್ ಖಾಲಿದ್ ಮೇಲೆ ಸೋಮವಾರ ಗುಂಡಿನ ದಾಳಿ ನಡೆದಿದೆ. ಖಾಲಿದ್‌ ಅಪಾಯದಿಂದ ಪಾರಾಗಿದ್ದಾರೆ. ಸಂಸತ್‌ ಭವನದ ಅನತಿ ದೂರದಲ್ಲಿ ಈ ದಾಳಿ ನಡೆದಿದೆ.

ದೆಹಲಿಯ ರಫಿ ಮಾರ್ಗ ಬಳಿ ಇರುವ ಕಾನ್ಸ್ ಟಿಟ್ಯುಷನ್ ಕ್ಲಬ್ ಆಫ್ ಇಂಡಿಯಾ ಕಟ್ಟಡದ ಎದುರಿನ ರಸ್ತೆ ಬದಿಯ ಚಹದ ಅಂಗಡಿಯಲ್ಲಿ ಖಾಲಿದ್‌ ಚಹ ಕುಡಿಯುವಾಗ ಮಧ್ಯಾಹ್ನ 2.15ರ ಸುಮಾರಿಗೆ ದಾಳಿ ನಡೆದಿದೆ. ಕೂದಲೆಳೆಯ ಅಂತರದಲ್ಲಿ ಉಮರ್ ಖಾಲಿದ್ ಪಾರಾಗಿದ್ದಾರೆ.

ಸಂಸತ್ ಭವನದ ಅನತಿ ದೂರದಲ್ಲಿ ದಾಳಿ ನಡೆದಿದೆ. ಆಗಂತುಕರು ಬಂದೂಕು ‌ಎಸೆದು ಪರಾರಿಯಾಗಿದ್ದಾರೆ. ಗುರಿ ತಪ್ಪಿದ‌ಕೂಡಲೇ ದಾಳಿಕೋರ ಓಡಿ ಹೋಗಿದ್ದಾನೆ. ಆಗಂತುಕ ಓಡಿ ಹೋಗುವಾಗ ‘ಪ್ರಜಾವಾಣಿ’ ಕಚೇರಿ ಇರುವ ಐಎನ್‌ಎಸ್ ಕಟ್ಟಡದ ಎದುರು ನಾಡ ಪಿಸ್ತೂಲ್ ಬಿಸಾಕಿ ಹೋಗಿದ್ದಾನೆ.

ಆಗಂತುಕ ಉಮರ್ ಖಾಲಿದ್ ಹೊಟ್ಟೆಗೆ ಪಿಸ್ತೂಲ್ ಹಿಡಿದಾಗ ಪಕ್ಕದಲ್ಲಿದ್ದ ಸ್ನೇಹಿತ ಒದ್ದ ಕೂಡಲೇ ನಾಲ್ಕು ಹೆಜ್ಜೆ ಹಿಂದೆ ಹೋಗಿ ಆಗಂತುಕ ಗುಂಡು ಹಾರಿಸಿದ್ದಾನೆ. ಮೊದಲ‌ ಬಾರಿ ಗುರಿ ತಪ್ಪಿದಾಗ ಸ್ವಲ್ಪ ದೂರ ಹೋಗಿ ಮತ್ತೊಂದು ಸುತ್ತು ಗುಂಡು ಹಾರಿಸಿದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಎರಡು ಬಾರಿ ಗುಂಡು ಹಾರಿಸಿ ಓಡಿ ಹೋಗುವಾಗ ಆಗಂತುಕನ ಕೈಯಿಂದ ಪಿಸ್ತೂಲ್‌ ಜಾರಿ ಬಿದ್ದಿದೆ.

ಆಗಂತುಕ ಘಟನಾ ಸ್ಥಳದಲ್ಲಿ ಬಿಸಾಕಿರುವ ನಾಡ ಪಿಸ್ತೂಲ್‌.
ಆಗಂತುಕ ಘಟನಾ ಸ್ಥಳದಲ್ಲಿ ಬಿಸಾಕಿರುವ ನಾಡ ಪಿಸ್ತೂಲ್‌.

ಗೌರಿ ಲಂಕೇಶ್ ಹತ್ಯೆ ಮಾದರಿಯಲ್ಲಿ ಹತ್ಯೆಗೆ ಯತ್ನ ನಡೆದಿದೆ. ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ. ಘಟನೆ ಕುರಿತು ಪೊಲೀಸರು ಉಮರ್ ಖಾಲಿದ್ ವಿಚಾರಣೆ ನಡೆಸುತ್ತಿದ್ದಾರೆ. ದಾಳಿಯಲ್ಲಿ ಎಷ್ಟು ಜನ ಇದ್ದರು ಎಂಬ ಮಾಹಿತಿ ಇಲ್ಲ. ಎರಡು ಬಾರಿ ಗುಂಡಿನ ದಾಳಿ ನಡೆದಿದೆ.

ಕಾನ್ಸ್‌‌ಟಿಟ್ಯೂಷನ್ ಕ್ಲಬ್ ಆಫ್‌ ಇಂಡಿಯಾ ಸಭಾಂಗಣದಲ್ಲಿ ‘ಯುನೈಟೆಡ್ ಅಗೇನ್ಸ್ಟ್ ಹೇಟ್' ಸಂಘಟನೆ ಹಮ್ಮಿಕೊಂಡಿದ್ದ ಕೌಫ್‌ ಸೇ ಆಜಾದಿ’(ಭಯದಿಂದ ಸ್ವಾತಂತ್ರ್ಯ) ಕಾರ್ಯಕ್ರಮಕ್ಕೆ ಭಾಗವಹಿಸಲು ಉಮರ್ ಖಾಲಿದ್ ಬಂದಿದ್ದರು. ಘಟನೆಯಿಂದಾಗಿ ಈಗ ‌ಅರ್ಧ ಗಂಟೆ ತಡವಾಗಿ ಕಾರ್ಯಕ್ರಮ ಆರಂಭವಾಗಿದೆ.

‘ಯುನೈಟೆಡ್ ಅಗೇನ್ಸ್ಟ್ ಹೇಟ್' ಸಂಘಟನೆ ಹಮ್ಮಿಕೊಂಡಿದ್ದ ‘ಕೌಫ್‌ ಸೇ ಆಜಾದಿ’(ಭಯದಿಂದ ಸ್ವಾತಂತ್ರ್ಯ) ಕಾರ್ಯಕ್ರಮದ ಬ್ಯಾನರ್‌
‘ಯುನೈಟೆಡ್ ಅಗೇನ್ಸ್ಟ್ ಹೇಟ್' ಸಂಘಟನೆ ಹಮ್ಮಿಕೊಂಡಿದ್ದ ‘ಕೌಫ್‌ ಸೇ ಆಜಾದಿ’(ಭಯದಿಂದ ಸ್ವಾತಂತ್ರ್ಯ) ಕಾರ್ಯಕ್ರಮದ ಬ್ಯಾನರ್‌

ತನಿಖೆ ಕೈಗೊಂಡಿದ್ದೇವೆ: ಪೊಲೀಸ್‌

ಉಮರ್‌ ಖಾಲಿದ್ ಜತೆಗಾರರೊಟ್ಟಿಗೆ ಚಹಾ ಅಂಗಡಿ ಮುಂದೆ ಚಹಾ ಕುಡಿಯುತ್ತಿದ್ದಾಗ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಖಾಲಿದ್‌ ಕೆಳಗೆ ಬಿದ್ದಿದ್ದಾರೆ. ಅವರಿಗೆ ಅಪಾಯವಾಗಿಲ್ಲ, ಸುರಕ್ಷಿತವಾಗಿದ್ದಾರೆ. ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ದೆಹಲಿ ಜಂಟಿ ಸಿಪಿ ಅಜಯ್‌ ಚೌಧರಿ ಹೇಳಿದ್ದಾರೆ ಎಂದು ಎಎನ್‌ಐ ಟ್ವಿಟ್‌ ಮಾಡಿದೆ.

ಘಟನೆ ಬಗ್ಗೆ ಪರಿಶೀಲಿಸಲಾಗುತ್ತಿದೆ. ತಮ್ಮ ಮೇಲೆ ದಾಳಿ ನಡೆದಿದೆ ಎಂದು ಖಾಲಿದ್‌ ಹೇಳಿದರು. ವ್ಯಕ್ತಿಯೊಬ್ಬ ಉಮರ್ ಖಾಲಿದ್‌ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಆ ವೇಳೆ ಯಾರೋ ಅವರನ್ನು ತಳಿದ್ದಾರೆ. ಆಗ ಮತ್ತೆ ಗುಂಡು ಹಾರಿಸಲು ಯತ್ನಿಸಿದ್ದಾನೆ. ಅವನನ್ನು ಬೆನ್ನಟ್ಟಿದ ವೇಳೆ, ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಈ ಕುರಿತು ಉಮರ್‌ ಖಾಲಿದ್ ಘಟನೆಯನ್ನು ವಿವರಿಸಿದ್ದಾರೆ ಎಂದು ಡಿಸಿಪಿ ಮಧುರ್ ವರ್ಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT