ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಸ್ಲಿಂ ಯುವಕರಿಗೆ ವಿಶೇಷ ಐ.ಟಿ. ಪಾರ್ಕ್‌: ಕೆ.ಚಂದ್ರಶೇಖರ ರಾವ್ ಭರವಸೆ

Published 23 ನವೆಂಬರ್ 2023, 16:01 IST
Last Updated 23 ನವೆಂಬರ್ 2023, 16:01 IST
ಅಕ್ಷರ ಗಾತ್ರ

ಹೈದರಾಬಾದ್: ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವ ಉದ್ದೇಶದಿಂದ ಬಿಆರ್‌ಎಸ್‌ ಅಧ್ಯಕ್ಷ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು, ‘ಮತ್ತೆ ಅಧಿಕಾರಕ್ಕೆ ಬಂದರೆ, ಮುಸ್ಲಿಂ ಸಮುದಾಯದ ಯುವಕರಿಗಾಗಿ ಹೈದರಾಬಾದ್ ಸಮೀಪದಲ್ಲಿ ವಿಶೇಷವಾದ ಮಾಹಿತಿ ತಂತ್ರಜ್ಞಾನ ಪಾರ್ಕ್‌ ಸ್ಥಾಪಿಸಲಾಗುವುದು’ ಎಂದು ಘೋಷಿಸಿದ್ದಾರೆ.

ಮಹೇಶ್ವರಂನಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ತಮ್ಮ ನೇತೃತ್ವದ ಸರ್ಕಾರವು ಹಿಂದೂಗಳು ಹಾಗೂ ಮುಸ್ಲಿಮರನ್ನು ಎರಡು ಕಣ್ಣುಗಳಂತೆ ಕಾಣುತ್ತದೆ ಎಂದರು.

‘ನಾವು ಇಂದು ಪಿಂಚಣಿ ನೀಡುತ್ತಿದ್ದೇವೆ, ಅದು ಮುಸ್ಲಿಮರಿಗೂ ಸಿಗುತ್ತಿದೆ. ನಾವು ಆರಂಭಿಸಿರುವ ವಸತಿ ಶಾಲೆಗಳಲ್ಲಿ ಮುಸ್ಲಿಂ ಮಕ್ಕಳೂ ಓದುತ್ತಿದ್ದಾರೆ. ನಾವು ಎಲ್ಲರನ್ನೂ ಜೊತೆಯಾಗಿ ಕರೆದೊಯ್ಯುತ್ತೇವೆ’ ಎಂದು ಕೆಸಿಆರ್ ಹೇಳಿದರು.

ತೆಲಂಗಾಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಇಲ್ಲ, ರಾಜ್ಯದಲ್ಲಿ ಶಾಂತಿ ಇದೆ ಎಂದು ಹೇಳಿದ ಕೆಸಿಆರ್, ಕಳೆದ ಹತ್ತು ವರ್ಷಗಳಲ್ಲಿ ಬಿಆರ್‌ಎಸ್‌ ನೇತೃತ್ವದ ಸರ್ಕಾರವು ಅಲ್ಪಸಂಖ್ಯಾತ ಸಮುದಾಯದವರ ಅಭಿವೃದ್ಧಿಗಾಗಿ ₹12 ಸಾವಿರ ಕೋಟಿ ವೆಚ್ಚ ಮಾಡಿದೆ ಎಂದರು. ಕಾಂಗ್ರೆಸ್ ಪಕ್ಷವು 10 ವರ್ಷಗಳ ಅವಧಿಯಲ್ಲಿ ₹2 ಸಾವಿರ ಕೋಟಿ ಮಾತ್ರ ವೆಚ್ಚ ಮಾಡಿತ್ತು ಎಂದು ದೂರಿದರು.

ತಾವು ಜೀವಂತ ಇರುವವರೆಗೆ ತೆಲಂಗಾಣ ರಾಜ್ಯವು ಧರ್ಮನಿರಪೇಕ್ಷವಾಗಿ ಉಳಿಯಲಿದೆ ಎಂದರು. ತೆಲಂಗಾಣ ರಾಜ್ಯ ರಚನೆ ಆದಾಗ ಪರಿಸ್ಥಿತಿ ಬಹಳ ಗೊಂದಲಮಯವಾಗಿತ್ತು. ಕುಡಿಯಲು ಹಾಗೂ ಕೃಷಿ ಚಟುವಟಿಕೆಗಳಿಗೆ ನೀರಿನ ವ್ಯವಸ್ಥೆ ಸರಿಯಾಗಿರಲಿಲ್ಲ ಎಂದು ಹೇಳಿದರು.

ಪಕ್ಷವು ಮತ್ತೆ ಅಧಿಕಾರಕ್ಕೆ ಬಂದಲ್ಲಿ, ರೈತ ಬಂಧು ಯೋಜನೆಯ ಅಡಿಯಲ್ಲಿ ನೀಡುತ್ತಿರುವ ನೆರವಿನ ಮೊತ್ತವನ್ನು ಹಂತಹಂತವಾಗಿ ₹16 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂಬ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT