ಹೈದರಾಬಾದ್: ‘ಕಾಂಗ್ರೆಸ್, ಬಿಆರ್ಎಸ್ ಮತ್ತು ಎಐಎಂಐಎಂ ಪಕ್ಷಗಳು ತುಷ್ಟೀಕರಣ ರಾಜಕಾರಣದಲ್ಲಿ ತೊಡಗಿದ್ದು, ಷರಿಯಾ (ಇಸ್ಲಾಮಿಕ್ ಕಾನೂನು) ಮತ್ತು ಕುರಾನ್ ಆಧಾರದ ಮೇಲೆ ತೆಲಂಗಾಣದಲ್ಲಿ ಆಡಳಿತ ನಡೆಸಲು ಬಯಸುತ್ತಿವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದರು.
ತೆಲಂಗಾಣದಲ್ಲಿ ಗುರುವಾರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ಓಲೈಕೆ ರಾಜಕಾರಣದಲ್ಲಿ ತೊಡಗಿರುವವರು ಹೈದರಾಬಾದ್ ವಿಮೋಚನಾ ದಿನ (ಸೆಪ್ಟೆಂಬರ್ 17) ಆಚರಿಸಲು ಅವಕಾಶ ನೀಡುವುದಿಲ್ಲ. ರಾಮನವಮಿ ಮೆರವಣಿಗೆಗೂ ಅವಕಾಶ ಕೊಡುವುದಿಲ್ಲ. ಸಿಎಎಯನ್ನು ವಿರೋಧಿಸುವರು’ ಎಂದು ವಾಗ್ದಾಳಿ ನಡೆಸಿದರು.
ಈ ಬಾರಿಯ ಲೋಕಸಭಾ ಚುನಾವಣೆಯು ಪ್ರಧಾನಿ ನರೇಂದ್ರ ಅವರ ‘ಭಾರತೀಯ ಗ್ಯಾರಂಟಿ’ ಹಾಗೂ ರಾಹುಲ್ ಗಾಂಧಿ ಅವರ ‘ಚೀನಾ ಗ್ಯಾರಂಟಿ’ ನಡುವಣ ಹೋರಾಟ ಎಂದು ಬಣ್ಣಿಸಿದರು.
‘2019ರ ಚುನಾವಣೆಯಲ್ಲಿ ಬಿಜೆಪಿಯು ತೆಲಂಗಾಣದ 17 ಸ್ಥಾನಗಳಲ್ಲಿ ನಾಲ್ಕನ್ನು ಗೆದ್ದುಕೊಂಡಿತ್ತು. ಈ ಬಾರಿ 10ಕ್ಕೂ ಅಧಿಕ ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ. ಬಿಜೆಪಿಯು 400 ಸ್ಥಾನಗಳ ಗುರಿ ತಲುಪಲು ತೆಲಂಗಾಣದ ಜನರೂ ಕೊಡುಗೆ ನೀಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಮೋದಿ ಅವರು ಮೀಸಲಾತಿ ರದ್ದುಪಡಿಸುವರು ಎಂದು ಕಾಂಗ್ರೆಸ್ ಸುಳ್ಳು ಹರಡುತ್ತಿದೆ. ನಮ್ಮ ಸರ್ಕಾರ 10 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಅಂತಹ ಕೆಲಸ ಮಾಡಿಲ್ಲ’ ಎಂದು ತಿಳಿಸಿದರು.
ರಾಯ್ಬರೇಲಿ: ಕಾಂಗ್ರೆಸ್ ಪಕ್ಷವು ಅಮೇಠಿಯಲ್ಲಿ ಸ್ಥಳೀಯ ಮುಖಂಡರನ್ನು ಕಣಕ್ಕಿಳಿಸದೆ ‘ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಗುಮಾಸ್ತ’ನನ್ನು ಸ್ಪರ್ಧೆಗಿಳಿಸಿದೆ ಎಂದು ರಾಯ್ಬರೇಲಿಯ ಬಿಜೆಪಿ ಅಭ್ಯರ್ಥಿ ದಿನೇಶ್ ಪ್ರತಾಪ್ ಸಿಂಗ್ ಲೇವಡಿ ಮಾಡಿದರು.
ಕಾಂಗ್ರೆಸ್ ಪಕ್ಷವು ಅಮೇಠಿ ಕ್ಷೇತ್ರದಿಂದ ಕಿಶೋರಿ ಲಾಲ್ ಶರ್ಮಾ ಅವರನ್ನು ಕಣಕ್ಕಿಳಿಸಿದೆ. ಶರ್ಮಾ ಅವರು ಗಾಂಧಿ ಕುಟುಂಬದ ಆಪ್ತರೂ ಹೌದು. ‘ಅಮೇಠಿಯಲ್ಲಿ ಕಾಂಗ್ರೆಸ್ಗೆ ಸ್ಥಳೀಯ ನಾಯಕರು ಇಲ್ಲವೇ? ಇಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಿಯಾಂಕಾ ಅವರ ‘ಗುಮಾಸ್ತ’ನನ್ನು ಲುಧಿಯಾನದಿಂದ ಕರೆತಂದಿದೆ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.