ಚಂಡೀಗಢ: ಜುಲೈ 31ರಂದು ನಡೆದ ನೂಹ್ ಹಿಂಸಾಚಾರದಲ್ಲಿ ಮೃತಪಟ್ಟ ಪಾಣಿಪತ್ ಮೂಲದ ವ್ಯಕ್ತಿಯ ಕುಟುಂಬವನ್ನು ಹರಿಯಾಣ ಮುಖ್ಯಮಂತ್ರಿ ಮನೋಹರ್ಲಾಲ್ ಖಟ್ಟರ್ ಭೇಟಿ ಮಾಡಿದರು.
ಗಲಭೆಯಲ್ಲಿ ಮೃತಪಟ್ಟ 24 ವರ್ಷದ ಅಭಿಷೇಕ್ ಮನೆಗೆ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಅಲ್ಲದೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಗಳ ಜತೆ ರಾಣಿಪಟ್ ಗ್ರಾಮೀಣ ಕ್ಷೇತ್ರದ ಶಾಸಕ ಮಹಿಪಾಲ್ ಧಂದ ಕೂಡ ಇದ್ದರು. ಕಷ್ಟದ ಸಮಯದಲ್ಲಿ ಕುಟುಂಬದ ಜತೆ ಇರುವುದಾಗಿ ಅವರು ಧೈರ್ಯ ತುಂಬಿದರು.
ಜುಲೈ 31ರಂದು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಯಾತ್ರೆ ವೇಳೆ ಗಲಭೆ ಉಂಟಾಗಿತ್ತು. ಇದರಲ್ಲಿ ಅಭಿಷೇಕ್ ಸೇರಿ 6 ಮಂದಿ ಸಾವಿಗೀಡಾಗಿದ್ದರು.