ಅಮರಾವತಿ: ವೈಎಸ್ಆರ್ ಕಾಂಗ್ರೆಸ್ನಿಂದ ಅಧಿಕಾರವನ್ನು ಮರಳಿ ಪಡೆಯುವ ಸಲುವಾಗಿ ಆಂಧ್ರದ ಶಾಸಕ ಹಾಗೂ ತೆಲುಗು ದೇಶಂ ಪಕ್ಷದ (ಟಿಡಿಪಿ) ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರು 2023ರ ಜನವರಿ 27ರಿಂದ 4 ಸಾವಿರ ಕಿ.ಮೀ ದೂರದ ‘ಪಾದಯಾತ್ರೆ’ ಆರಂಭಿಸಲಿದ್ದಾರೆ.
ಟಿಡಿಪಿ ವರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ರಾಜಕೀಯ ವಾರಸುದಾರರಾಗಿರುವ ನಾರಾ ಲೋಕೇಶ್ ಅವರ ಕಾರ್ಯತಂತ್ರದ ನಡೆ ಬಗ್ಗೆ ಕೆಲ ದಿನಗಳಿಂದ ಚರ್ಚೆಯಾಗುತ್ತಿದ್ದು, ಇದೀಗ ಅವರು ತಮ್ಮ ಪಾದಯಾತ್ರೆ ಯೋಜನೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
‘ಆಂಧ್ರದಾದ್ಯಂತ ಜ. 27ರಿಂದ ನಾನು ಸುಮಾರು 400 ದಿನಗಳ ಕಾಲ 4 ಸಾವಿರ ಕಿ.ಮೀ. ಗಳಷ್ಟು ಪಾದಯಾತ್ರೆ ಕೈಗೊಳ್ಳಲಿದ್ದೇನೆ. ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿಗೆ ನಮ್ಮ ಕೋಟೆಯನ್ನು ಒಡೆಯಲು ಬಿಡುವುದಿಲ್ಲ’ ಎಂದು ಲೋಕೇಶ್ ಮಂಗಳಗಿರಿಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದಾರೆ.
2019ರ ವಿಧಾನಸಭಾ ಚುನಾವಣೆಯಲ್ಲಿ ಅಮರಾವತಿಯ ಭಾಗವಾಗಿರುವ ಮಂಗಳಗಿರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಲೋಕೇಶ್ ಸೋಲು ಅನುಭವಿಸಿದ್ದರು. 2024 ಏಪ್ರಿಲ್– ಮೇ ತಿಂಗಳಲ್ಲಿ ಆಂಧ್ರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.