ನವದೆಹಲಿ: ಹುತಾತ್ಮರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜಘಾಟ್ಗೆ ತೆರಳಿ ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
ಉಪಾಧ್ಯಕ್ಷ ಜಗದೀಪ್ ಧನಕರ್ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರೂ ಈ ವೇಳೆ ಉಪಸ್ಥಿತ
ರಿದ್ದರು. ಸ್ಮಾರಕದ ಬಳಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಮೋದಿ ಅವರು, ‘ಪೂಜ್ಯ ಬಾಪೂ ಅವರ ಪುಣ್ಯತಿಥಿಯಂದು ಅವರಿಗೆ ಗೌರವ ಅರ್ಪಿಸಿದೆ. ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದ ಎಲ್ಲಾ ಹುತಾತ್ಮರಿಗೂ ಈ ವೇಳೆ ಗೌರವ ಸಲ್ಲಿಸಿದೆ. ಅವರ ತ್ಯಾಗವು, ದೇಶದ ಬಗ್ಗೆ ಅವರಿಗಿದ್ದ ಮುನ್ನೋಟವನ್ನು ಸಾಕಾರಗೊಳಿಸಲು ಮತ್ತು ಜನರ ಸೇವೆ ಮಾಡಲು ನಮಗೆ ಸ್ಫೂರ್ತಿಯಾಗಿದೆ’ ಎಂದು ಬರೆದಿದ್ದಾರೆ.
ಮೋದಿ ಅವರು ತಮ್ಮ ವೈಯಕ್ತಿಕ ದಿನಚರಿ ಪುಸ್ತಕದಲ್ಲಿ ದಾಖಲಿಸಿರುವ ಮಹಾತ್ಮ ಗಾಂಧಿ ಅವರ ಹೇಳಿಕೆಗಳಿರುವ ಪುಟಗಳನ್ನು ಅವರ ಮತ್ತೊಂದು ‘ಎಕ್ಸ್’ ಖಾತೆ ‘@ಮೋದಿಆರ್ಕೈವ್ಸ್’ನಲ್ಲಿ ಪೋಸ್ಟ್ ಮಾಡಲಾಗಿದೆ.