ನಾಗ್ಪುರ್: ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ಅಕೋಲಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ರದ್ದಾಗಿದೆ. ಬಾಂಬೆ ಹೈಕೋರ್ಟ್ನ ನಾಗ್ಪುರ್ ಪೀಠ ಚುನಾವಣೆಯನ್ನು ರದ್ದು ಮಾಡಿ ಮಂಗಳವಾರ ಆದೇಶ ಹೊರಡಿಸಿದೆ.
ಏಪ್ರಿಲ್ 26ಕ್ಕೆ ಉಪ ಚುನಾವಣೆ ನಿಗದಿಯಾಗಿತ್ತು.
ಈ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಗೋವರ್ಧನ್ ಶರ್ಮಾ ಅವರು ಕಳೆದ ನವೆಂಬರ್ 3 ರಂದು ನಿಧನರಾಗಿದ್ದರು.
ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೆ ಅದರ ವಿರುದ್ಧ ಅನಿಲ್ ಧುಬೆ ಎನ್ನುವರು ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರಸ್ತುತ ವಿಧಾನಸಭೆಯ ಅಂತ್ಯದ ಅವಧಿ ಒಂದು ವರ್ಷಕ್ಕೂ ಕೆಳಗಿದ್ದರೆ ಉಪ ಚುನಾವಣೆ ನಡೆಸಬಾರದು ಎನ್ನುವ ಅರ್ಜಿದಾರರ ವಾದವನ್ನು ಎತ್ತಿ ಹಿಡಿದ ಹೈಕೋರ್ಟ್ ಏಪ್ರಿಲ್ 26ಕ್ಕೆ ನಡೆಯಬೇಕಿದ್ದ ಉಪ ಚುನಾವಣೆಯನ್ನು ರದ್ದುಗೊಳಿಸಿ ಚುನಾವಣಾ ಆಯೋಗದ ವಿರುದ್ಧ ಆದೇಶ ನೀಡಿದೆ.
2024 ಅಕ್ಟೋಬರ್ ನಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆ ಇದೆ.