ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳ ಕುರಿತು ಸಾಮಾಜಿಕ ಜಾಲತಾಣ
ಗಳಲ್ಲಿ ಹಾಸ್ಯಮಯ ಮತ್ತು ಹರಿತವಾದ ಸಂದೇಶ ಮತ್ತು ಚಿತ್ರಗಳು ಹರಿದಾಡುತ್ತಿವೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕುರಿತು ಹೆಚ್ಚಾಗಿ ಹರಿದಾಡುತ್ತಿರುವ ಮೀಮ್ಸ್ ಮತ್ತು ಟ್ರೋಲ್ಗಳು ಕಚಗುಳಿ ಇಡುವಂತಿವೆ.
‘ಪಪ್ಪು ಪಾಸ್ ಹೋಗಯಾ’ (ಪಪ್ಪು ಉತ್ತೀರ್ಣನಾದ) ಎಂಬ ಒಂದು ಸಾಲು ಸತತ ಸೋಲುಗಳಿಂದ ಕಂಗೆಟ್ಟಿದ್ದ ರಾಹುಲ್ ಗಾಂಧಿ ಅವರ ಯಶಸ್ಸನ್ನು ಬಣ್ಣಿಸುತ್ತದೆ.
ಬಿಜೆಪಿ, ಹಿಂದುತ್ವ ಪರ ಮತ್ತು ಬಲಪಂಥೀಯ ಸಂಘಟನೆಗಳು ರಾಹುಲ್ ಗಾಂಧಿ ಅವರನ್ನು ‘ಪಪ್ಪು’ ಎಂದು ಲೇವಡಿ ಮಾಡುತ್ತಿವೆ. ಅದಕ್ಕೆ ಉತ್ತರ ಎಂಬ ರೀತಿಯಲ್ಲಿಯೂ ಈ ಟ್ವೀಟ್ ಇದೆ.
‘ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ನಗೆಪಾಟಲಿಗೀಡು ಮಾಡಿದ್ದ ಬಿಜೆಪಿಯವರೇ ಈಗ ಮೂರು ಪಟ್ಟು ಪಪ್ಪುಗಳಾಗಿದ್ದಾರೆ’ ಎಂದು ನಟಿ ಸ್ವರ ಭಾಸ್ಕರ್ ಅವರು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
‘ಪಪ್ಪು ಬರೀ ಪಾಸ್ ಆಗಿಲ್ಲ. ಒಂದೇ ಬಾರಿಗೆ ಡಾಕ್ಟರೇಟ್ ಗಳಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ದೇಶದ ಜನರು ಅವರಿಂದ ಇದೇ ರೀತಿಯ ಸಾಧನೆ ನೋಡಲು ಬಯಸಿದ್ದಾರೆ’ ಎಂದು ಲೇಖಕಿ ಶೋಭಾ ಡೇ ಟ್ವೀಟ್ ಮಾಡಿದ್ದಾರೆ.
ಮೂರು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು ಹೀನಾಯವಾಗಿ ನೆಲಕಚ್ಚಿದ ಬಿಜೆಪಿಯ ಸೋಲನ್ನು ‘ಬಿಜೆಪಿ ಗೆಟ್ಸ್ ತ್ರಿಪಲ್ ತಲಾಖ್’ (ಬಿಜೆಪಿಗೆ ತ್ರಿವಳಿ ತಲಾಖ್) ಎಂದು ಕಾಲೆಳೆಯಲಾಗಿದೆ.
ಬಿಜೆಪಿಯ ತಾರಾ ಪ್ರಚಾರಕ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಹೆಸರು ಬದಲಾಯಿಸುವ ಪ್ರವೃತ್ತಿಯನ್ನು ನಾನಾ ರೀತಿ ಲೇವಡಿ ಮಾಡಲಾಗಿದೆ.
‘ಕಾಂಗ್ರೆಸ್ ಪಕ್ಷದ ಹೆಸರನ್ನು ಬಿಜೆಪಿ ಎಂದು ಬದಲಾಯಿಸಿ ಬಿಡೋಣ’ ಎಂದು ಯೋಗಿಯು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಂತ್ವನ ಹೇಳುವ ಮೀಮ್ ನಗೆಗಡಲಲ್ಲಿ ತೇಲಿಸುತ್ತದೆ.
‘ಪದಕೋಶದಲ್ಲಿರುವ ಸೋಲು ಎಂಬ ಪದದ ಅರ್ಥವನ್ನು ಗೆಲುವು ಎಂದು ಬದಲಾಯಿಸಿದರಾಯಿತು’ ಎಂಬ ಉಚಿತ ಸಲಹೆಯನ್ನು ಯೋಗಿಯು ಪ್ರಧಾನಿಗೆ ನೀಡಿದ್ದಾರೆ.
ಯೋಗಿ ಆದಿತ್ಯನಾಥ ತಮ್ಮ ಹೆಸರನ್ನು ಅಜಯ್ ಸಿಂಗ್ ಬಿಷ್ಠ ಎಂದು ಬದಲಾಯಿಸಿಕೊಳ್ಳುವಂತೆ ಕೆಲವರು ಸಲಹೆ ಮಾಡಿದ್ದಾರೆ. ಯೋಗಿ ಮೂಲ ಹೆಸರು ಅಜಯ್ ಸಿಂಗ್.
ಹನುಮಾನನಿಗೆ ಯೋಗಿ ಜಾತಿ ಪ್ರಮಾಣ ಪತ್ರ ನೀಡಿದ್ದು ಮುಳುವಾಯಿತು ಎಂದು ಕೆಲವರು ಬಿಜೆಪಿಯ ಸೋಲನ್ನು ವಿಶ್ಲೇಷಿಸಿದ್ದಾರೆ.
‘ಅಬ್ ಕಿ ಬಾರ್, ಖೋ ದಿ ಸರ್ಕಾರ್’ (ಈ ಬಾರಿ ಸರ್ಕಾರವನ್ನೇ ಕಳೆದುಕೊಂಡರು) ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರು ‘ಅಬ್ ಕಿ ಬಾರ್ ಮೋದಿ ಸರ್ಕಾರ್’ ಎಂಬ ಘೋಷಣೆಯನ್ನು ಲೇವಡಿ ಮಾಡಿದ್ದಾರೆ.
ಬಿಜೆಪಿ ಮುಕ್ತ ಭಾರತ’
2003ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮಾಡಿದ್ದ ಹಳೆಯ ಟ್ವೀಟ್ ಅನ್ನು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಹಾಗೂ ಚಿತ್ರನಟಿ ದಿವ್ಯ ಸ್ಪಂದನಾ (ರಮ್ಯಾ) ಮರು ಟ್ವೀಟ್ ಮಾಡಿದ್ದಾರೆ.
ಈ ಹಿಂದಿನ ಐದು ರಾಜ್ಯಗಳ ಚುನಾವಣಾ ಫಲಿತಾಂಶವನ್ನು ಮೋದಿ ‘ಕಾಂಗ್ರೆಸ್ ಮುಕ್ತ ಭಾರತ’ದ ಆರಂಭ ಎಂದು ಬಣ್ಣಿಸಿದ್ದರು. ದಿವ್ಯ ಸ್ಪಂದನಾ ಅವರು ಆ ಟ್ವೀಟ್ನಲ್ಲಿ ಕಾಂಗ್ರೆಸ್ ಹೆಸರು ಅಳಿಸಿ ಕೇಸರಿ ಬಣ್ಣದಿಂದ ಬಿಜೆಪಿ ಎಂದು ಬರೆದಿದ್ದಾರೆ.
‘ಬಿಜೆಪಿ ಮುಕ್ತ ಭಾರತ’ಕ್ಕೆ ಚುನಾವಣಾ ಫಲಿತಾಂಶ ನಾಂದಿ ಎಂದು ಅವರು ಮೋದಿ ಅವರಿಗೆ ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.