ನವದೆಹಲಿ: ಸಂಸತ್ನ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ವಶದಲ್ಲಿರುವ ಆರೋಪಿ ಮಹೇಶ್ ಕುಮಾವತ್ ಅವರ ಪೊಲೀಸ್ ವಶದ ಅವಧಿಯನ್ನು ಜನವರಿ 5ರವರೆಗೆ ವಿಸ್ತರಿಸಿ ಇಲ್ಲಿಯ ನ್ಯಾಯಾಲಯವೊಂದು ಶನಿವಾರ ಆದೇಶ ಹೊರಡಿಸಿತು.
ಪ್ರಕರಣದ ಸಂಚನ್ನು ಸಂಪೂರ್ಣವಾಗಿ ಬಯಲಿಗೆಳೆಯಲು ಕುಮಾವತ್ ಅವರನ್ನು ವಿಚಾರಣೆಗೆ ಒಳಪಡಿಸಬೇಕಿದೆ. ಹಾಗಾಗಿ ಅವರ ಪೊಲೀಸ್ ವಶದ ಅವಧಿಯನ್ನು ವಿಸ್ತರಿಸಬೇಕು ಎಂದು ದೆಹಲಿ ಪೊಲೀಸರು ನ್ಯಾಯಾಲಯವನ್ನು ಕೋರಿದರು. ಬಳಿಕ, ವಿಶೇಷ ನ್ಯಾಯಾಧೀಶೆ ಹರದೀಪ್ ಕೌರ್ ಅವರು ಅವಧಿ ವಿಸ್ತರಿಸಿದರು.
ಆರೋಪಿಗಳಾದ ಕುಮಾವತ್ ಮತ್ತು ಲಲಿತ್ ಝಾ ಅವರು ಗುರುವಾರ ರಾತ್ರಿ ತಾವಾಗಿಯೇ ಪೊಲೀಸ್ ಠಾಣೆಯೊಂದಕ್ಕೆ ಬಂದು ಶರಣಾದರು. ಅವರನ್ನು ಪೊಲೀಸ್ ವಿಶೇಷ ಘಟಕದ ವಶಕ್ಕೆ ನೀಡಲಾಯಿತು. ಆಗಿನಿಂದಲೇ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳಾದ ಮನೋರಂಜನ್ ಡಿ. ಸಾಗರ್ ಶರ್ಮಾ, ಅಮೋಲ್ ಧನರಾಜ್ ಶಿಂದೆ ಮತ್ತು ನೀಲಂ ದೇವಿ ಅವರ ಪೊಲೀಸ್ ವಶದ ಅವಧಿಯನ್ನು ಜನವರಿ 5ರ ವರೆಗೆ ವಿಸ್ತರಿಸಿ ಈಚೆಗಷ್ಟೇ ನ್ಯಾಯಾಲಯ ಆದೇಶ ನೀಡಿದೆ.