ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪ್ರಧಾನಿ ಆಗುವ ಆಕಾಂಕ್ಷೆ ಇದೆಯೇ ಎಂಬ ಕುರಿತು ಅವರನ್ನೇ ಕೇಳಿ ಮಾಹಿತಿ ನೀಡುತ್ತೇನೆ ಎಂದು ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಶನಿವಾರ ಹೇಳಿದ್ದಾರೆ.
ಪಟ್ನಾದ ಆಯೋಜನೆಯಾಗಿದ್ದ ಕಾನೂನು ವಿದ್ಯಾರ್ಥಿಗಳ ಸಮಾರಂಭದಲ್ಲಿ ಭಾಗಿಯಾಗಿದ್ದ ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೀಗೆ ಹೇಳಿದ್ದಾರೆ.
ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ನಿತೀಶ್ ಕುಮಾರ್ ಅವರು ನಡೆಸುತ್ತಿರುವ ಪ್ರಶ್ನೆಗೆ ಉತ್ತರಿಸಿದ ಅವರು, ‘ನಿತೀಶ್ ನನ್ನ ಹಳೇ ಸ್ನೇಹಿತ. ಈ ರೀತಿಯ ಪ್ರಶ್ನೆಗಳಿಗೆ ಹೇಗೆ ಉತ್ತರಿಸಲಿ’ ಎಂದು ಹೇಳಿದರು.
ಜನಸಂಖ್ಯೆ ವಿಚಾರದಲ್ಲಿ ಚೀನಾ ಭಾರತವನ್ನು ಹಿಂದಿಕ್ಕಿದೆ ಎಂದು ವಿಶ್ವಸಂಸ್ಥೆ ವರದಿ ನೀಡಿರುವ ಹಿನ್ನೆಲೆಯಲ್ಲಿ ಜನಸಂಖ್ಯಾ ನೀತಿ ರೂಪಿಸುವ ಅಗತ್ಯವಿದೆಯೇ ಎಂದು ಅವರಿಗೆ ಕೇಳಲಾಯಿತು. ಆ ಪ್ರಶ್ನೆಗೆ ಉತ್ತರಿಸಿದ ಅವರು, ‘ಆರ್ಥಿಕ ಅಭಿವೃದ್ಧಿ ದರಕ್ಕೆ ವಿರುದ್ಧವಾಗಿ ಜನಸಂಖ್ಯೆ ದರ ಹೆಚ್ಚಾಗುತ್ತಿದೆ. ಇಂದಿನ ಜನಸಂಖ್ಯೆ ಬೆಳವಣಿಗೆಯನ್ನು 50– 60 ವರ್ಷಗಳ ಹಿಂದಿನ ಜನಸಂಖ್ಯೆ ಬೆಳವಣಿಗೆಗೆ ಹೋಲಿಸಿ ನೋಡಿ. ಆರ್ಥಿಕತೆಯು ಶೇ 10ರ ದರದಲ್ಲಿ ಹೆಚ್ಚಳವಾದರೆ ಜನಸಂಖ್ಯೆಯಲ್ಲಿ ಸಹಜವಾಗಿ ಸ್ಥಿರತೆ ಬರುತ್ತದೆ. ಜನಸಂಖ್ಯೆ ನಿಯಂತ್ರಣಕ್ಕೆ ಇಂದಿರಾ ಗಾಂಧಿ ತಂದಿದ್ದ ನೀತಿಯಿಂದ ಉಂಟಾದ ಭೀಕರ ಪರಿಣಾಮವನ್ನು ನಾವು ಮರೆಯಬಾರದು’ ಎಂದರು.