ನವದೆಹಲಿ : ‘ಪ್ರಧಾನಿ ನರೇಂದ್ರ ಮೋದಿ ದಲಿತ ವಿರೋಧಿ ಮನಸ್ಥಿತಿ ಹೊಂದಿದ್ದಾರೆ. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ದಲಿತರಿಗೆ ರಕ್ಷಣೆ ಇಲ್ಲ. ಅವರನ್ನು ಬಡಿದು, ಸಾಯಿಸಲಾಗುತ್ತಿದೆ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಪರಿಶಿಷ್ಟರ ಮೇಲೆ ದೌರ್ಜನ್ಯ ತಡೆ ಕಾಯ್ದೆಯನ್ನು ಕೇಂದ್ರ ಸರ್ಕಾರ ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿ ಇಲ್ಲಿನ ಜಂತರ್ಮಂತರ್ನಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಪರಿಶಿಷ್ಟರ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ತಡೆಗಟ್ಟಲು ಕಾನೂನನ್ನು ಜಾರಿಗೆ ತಂದಿದ್ದೇ ಕಾಂಗ್ರೆಸ್. ಈಗ ಈ ಕಾನೂನಿನ ರಕ್ಷಣೆಗೆ ಪಕ್ಷ ಬದ್ಧವಾಗಿದೆ’ ಎಂದರು.
‘ಪ್ರತಿಯೊಬ್ಬರಿಗೂ ಬದುಕಲು ಅವಕಾಶ ಇರುವ ದೇಶ ನಮ್ಮದಾಗಬೇಕು. ದಲಿತರು, ಬಡವರು, ಬುಡಕಟ್ಟು ಜನರು ಅಥವಾ ಅಲ್ಪಸಂಖ್ಯಾತರು ಸೇರಿದಂತೆ ಪ್ರತಿಯೊಬ್ಬರ ಏಳಿಗೆ ಅಗತ್ಯ. ಎಲ್ಲರನ್ನೂ ಒಳಗೊಳ್ಳುವ ಇಂತಹ ಭಾರತಕ್ಕಾಗಿ ಪಕ್ಷ ಹೋರಾಟ ನಡೆಸುವುದು’ ಎಂದು ಹೇಳಿದರು.