ಬರಸಾತ್(ಪಶ್ಚಿಮ ಬಂಗಾಳ): ಟಿಎಂಸಿ ನಾಯಕ ಶಹಜಹಾನ್ ಶೇಖ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಪಶ್ಚಿಮ ಬಂಗಾಳದ ಸಂದೇಶ್ಖಾಲಿಯ ಮಹಿಳೆಯರನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದಾರೆ.
ಉತ್ತರ 24 ಪರಗಣ ಜಿಲ್ಲೆಯ ಬರಸಾತ್ನಲ್ಲಿ ರ್ಯಾಲಿ ಸಂದರ್ಭ ಮೋದಿ, ಮಹಿಳೆಯರನ್ನು ಭೇಟಿ ಮಾಡಿದ್ದಾರೆ. ಸಂದೇಶ್ಖಾಲಿ ಸಹ ಇದೇ ಜಿಲ್ಲೆಯಲ್ಲಿದೆ.
'ಸಾರ್ವಜನಿಕ ಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿ, ಸಂದೇಶ್ಖಾಲಿಯಿಂದ ಬಂದಿದ್ದ ಕೆಲ ಮಹಿಳೆಯರನ್ನು ಭೇಟಿ ಮಾಡಿದರು. ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಮಹಿಳೆಯರು ಮೋದಿ ಬಳಿ ಹೇಳಿಕೊಂಡರು’ ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಗ್ನಿಮಿತ್ರ ಪೌಲ್ ಹೇಳಿದ್ದಾರೆ.
ತಮ್ಮ ಮೇಲಿನ ದೌರ್ಜನ್ಯದ ಕುರಿತಂತೆ ಪ್ರಧಾನಿಗೆ ವಿವರಿಸುವ ವೇಳೆ ಮಹಿಳೆಯರು ಭಾವುಕರಾದರು. ಒಬ್ಬ ತಂದೆ ರೀತಿ ಮೋದಿ ತಾಳ್ಮೆಯಿಂದ ಅವರ ನೋವನ್ನು ಆಲಿಸಿದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಉತ್ತರ 24 ಪರಗಣ ಜಿಲ್ಲೆಯ ನದಿ ದ್ವೀಪ ಸಂದೇಶ್ಖಾಲಿ, ಟಿಎಂಸಿ ನಾಯಕ ಶಹಜಹಾನ್ ಶೇಖ್ ಅವರಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ರೈತರ ಭೂಮಿ ಅಕ್ರಮವಾಗಿ ವಶಪಡಿಸಿಕೊಂಡ ಆರೋಪಗಳ ಹಿನ್ನೆಲೆಯಲ್ಲಿ ಕುದಿಯುತ್ತಿದೆ.
ಫೆಬ್ರುವರಿ 29ರಂದು ಶಹಜಹಾನ್ ಅವರನ್ನು ಬಂಧಿಸಿರುವ ಪೊಲೀಸರು, ಕಲ್ಕತ್ತ ಹೈಕೋರ್ಟ್ ಆದೇಶದ ಬಳಿಕ ಮಂಗಳವಾರ ಸಿಬಿಐ ಕಸ್ಟಡಿಗೆ ಒಪ್ಪಿಸಿದ್ದಾರೆ.