ಕೋಲ್ಕತ್ತ: ವಿವಿಧ ವಿಷಯಗಳಿಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ನೀಡಿದ್ದ ಗ್ಯಾರಂಟಿಗಳು ಜಾರಿಗೆ ಬಂದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಮುಖಂಡ ಅಮಿತ್ ಮಿತ್ರಾ ಆರೋಪಿಸಿದರು.
ದೇಶದ ಶೇ 83ರಷ್ಟು ಯುವಜನರು ನಿರುದ್ಯೋಗಿಗಳಾಗಿದ್ದಾರೆ. ಶಿಕ್ಷಿತ ಯುವಕ, ಯುವತಿಯರಲ್ಲಿ ಮೂರನೇ ಎರಡರಷ್ಟು ಮಂದಿಗೆ ಉದ್ಯೋಗವಿಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಎನ್ಡಿಎ ಸರ್ಕಾರದ ‘ಕೌಶಲ ಭಾರತ’ ಯೋಜನೆಯು ಫಲಕಾರಿಯಾಗಿಲ್ಲ. ಇದರಿಂದ ಕೇವಲ ಶೇ 4ರಷ್ಟು ಯುವಜನರು ವೃತ್ತಿಪರ ತರಬೇತಿ ಪಡೆದಿದ್ದಾರೆ. ದೇಶದಲ್ಲಿ ಕುಟುಂಬಗಳ ನಿವ್ವಳ ಆರ್ಥಿಕ ಉಳಿತಾಯವು 50 ವರ್ಷಗಳಲ್ಲೇ ಅತ್ಯಂತ ಕೆಳಮಟ್ಟಕ್ಕಿಳಿದಿದೆ. ರೈತರ ಬೇಡಿಕೆಗಳನ್ನು ಕೇಂದ್ರ ಸರ್ಕಾರವು ಈಡೇರಿಸಿಲ್ಲ ಎಂದರು.
2021ರಲ್ಲಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಗೆಲುವು ಸಾಧಿಸಿದ ಬಳಿಕ ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಬೇಕಿರುವ ಅನುದಾನವನ್ನು ತಡೆಹಿಡಿದಿದೆ ಎಂದು ದೂರಿದರು.
‘ವಸತಿ ಯೋಜನೆಯ ಮತ್ತು ನರೇಗಾದ ಅನುದಾನದ ಬಿಡಿಗಾಸೂ ರಾಜ್ಯಕ್ಕೆ ಲಭಿಸಿಲ್ಲ’ ಎಂದು ಹೇಳಿದರು.
ಟಿಎಂಸಿಯು ‘ಇಂಡಿಯಾ’ ಒಕ್ಕೂಟದ ಜೊತೆಗಿದೆ ಎಂದರು. ರಾಜ್ಯದಲ್ಲಿ ‘ಇಂಡಿಯಾ’ ಮೈತ್ರಿಕೂಟಕ್ಕೆ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಅವರು ಅಡ್ಡಿಯಾಗಿದ್ದಾರೆ ಎಂದು ಈ ಹಿಂದೆ ಟಿಎಂಸಿ ಆರೋಪಿಸಿತ್ತು.