ನವದೆಹಲಿ: ಬಿಜೆಪಿ ಗೆಲುವಿನಲ್ಲಿ ರಾಹುಲ್ ಗಾಂಧಿ ಅವರ ಕೊಡುಗೆ ಅಪಾರವಾಗಿದ್ದು, ರಾಹುಲ್ ಗಾಂಧಿಗಿಂತ ದೊಡ್ಡ ವರದಾನ ಬಿಜೆಪಿಗೆ ಮತ್ತೊಂದಿಲ್ಲ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಟೈಮ್ಸ್ ನೌ ಸುದ್ದಿ ವಾಹಿನಿ ಜೊತೆ ಮಾತನಾಡಿದ ಠಾಕೂರ್, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ರಾಹುಲ್ ಗಾಂಧಿ ಅವರು ದೊಡ್ಡ ಪಕ್ಷವೊಂದರ ನಾಯಕ ಆಗಿರುವುದರಿಂದ ಅವರ ಬಗ್ಗೆ ಗೌರವವಿದೆ. ಬಿಜೆಪಿ ಗೆಲುವಿನಲ್ಲಿ ಅವರು ನಮ್ಮಷ್ಟೇ ಶಕ್ತಿ ವ್ಯಯಿಸುತ್ತಾರೆ’ ಎಂದು ಹೇಳಿದರು.
ಭಾರತ್ ಜೋಡೊ ನ್ಯಾಯ ಯಾತ್ರೆ ಬಗ್ಗೆ ಮಾತನಾಡಿದ ಅವರು, ‘ರಾಹುಲ್ ಗಾಂಧಿ ವಿದೇಶ ಪ್ರವಾಸ ಮಾಡುವ ಬದಲು ದೇಶಾದ್ಯಂತ ಪ್ರವಾಸ ಮಾಡುತ್ತಿರುವುದು ಸಂತಸ ತಂದಿದೆ. ಆದರೆ, ಅದರಿಂದ ಅವರು ಸಾಧಿಸಿದ್ದೇನು ಎಂಬುದು ಗೊತ್ತಾಗಲಿಲ್ಲ. ಯಾತ್ರೆ ಮಧ್ಯಪ್ರದೇಶದ ಮೂಲಕ ಸಾಗಿತು, ಅಲ್ಲಿ ಕಾಂಗ್ರೆಸ್ ಸೋತಿತು. ಛತ್ತೀಸಗಢ, ರಾಜಸ್ಥಾನದ ಮೂಲಕ ಹಾದು ಹೋಗಿತ್ತು. ಅಲ್ಲಿಯೂ ಜಯ ಗಳಿಸಲಿಲ್ಲ. ಈಗ, ಯಾತ್ರೆಯು ಇಡೀ ದೇಶವನ್ನು ಸಂಚರಿಸಿದೆ. ಕಾಂಗ್ರೆಸ್ ಏನನ್ನು ಕಳೆದುಕೊಳ್ಳಲಿದೆ ಎಂಬುದನ್ನು ನೀವು ಊಹಿಸಬಹುದು’ ಎಂದರು.
ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಒಕ್ಕೂಟವು 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.