ಕೋಲ್ಕತ್ತ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಅತ್ಯಂತ ಸೌಹಾರ್ದಯುತ ಸಂಬಂಧ ಹೊಂದಿದ್ದು, ರಾಜ್ಯಪಾಲನಾಗಿ ಕೆಲಸ ಮಾಡಲು ಇಲ್ಲಿ ಯಾವುದೇ ರೀತಿಯ ತೊಂದರೆಗಳನ್ನು ಎದುರಿಸಿಲ್ಲ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಡಾ ಸಿ.ವಿ ಆನಂದ ಬೋಸ್ ಹೇಳಿದ್ದಾರೆ.
ಪಶ್ವಿಮ ಬಂಗಾಳದ ರಾಜ್ಯಪಾಲರಾಗಿ ಒಂದು ವರ್ಷ ಪೂರೈಸಿದ ಡಾ ಸಿ.ಎನ್.ಬೋಸ್ ಅವರು ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
‘ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ನಡುವಿನ ಸಂಬಂಧವು ಎರಡು ರೀತಿಯಲ್ಲಿ ಇರುತ್ತದೆ. ವೈಯಕ್ತಿಕವಾಗಿ ನಮ್ಮ ಸಂಬಂಧವು ಪರಸ್ಪರ ಗೌರವಯುತವಾಗಿ ಕೂಡಿರುತ್ತದೆ. ಕೆಲಸದ ವಿಚಾರಕ್ಕೆ ಬಂದರೆ ನಮ್ಮ ನಿರ್ಧಾರಗಳಲ್ಲಿ ವ್ಯತ್ಯಾಸಗಳಿರಬಹುದು. ಯಾಕೆಂದರೆ ನಾವು(ರಾಜ್ಯಪಾಲರು) ಮತ್ತು ಮುಖ್ಯಮಂತ್ರಿಗಳು ಪ್ರತಿಯೊಂದು ವಿಷಯದಲ್ಲೂ ಒಂದೇ ರೀತಿ ಯೋಚಿಸಬೇಕಾಗಿಲ್ಲ’ ಎಂದು ಹೇಳಿದರು.
‘ಸಾಂವಿಧಾನಿಕವಾಗಿ ಆಯ್ಕೆಯಾಗಿ ಬಂದ ನಾನು ಜನರ ಕಲ್ಯಾಣಕೋಸ್ಕರ ಕೆಲಸ ಮಾಡುತ್ತೇನೆ. ಇಲ್ಲಿ(ಪಶ್ಚಿಮ ಬಂಗಾಳ) ರಾಜ್ಯಪಾಲನಾಗಿ ಕೆಲಸ ಮಾಡಲು ನಾನು ಯಾವುದೇ ತೊಂದರೆಗಳನ್ನು ಎದುರಿಸಿಲ್ಲ. ನನಗೆ ನನ್ನದೇ ಆದ ಮಾನದಂಡಗಳಿವೆ. ಅದರಂತೆ ನಡೆದುಕೊಳ್ಳುತ್ತೇನೆ’ ಎಂದರು.
‘ಪ್ರಜಾಪ್ರಭುತ್ವ ಎಂದ ಮೇಲೆ ಟೀಕೆಗಳು ಸಾಮಾನ್ಯ. ಟೀಕೆಗಳನ್ನು ದೂರವಿಡಬೇಕು ಎಂದು ನಾನು ಭಾವಿಸುವುದಿಲ್ಲ. ಟೀಕೆಗಳನ್ನು ಮುಕ್ತವಾಗಿ ಸ್ವಾಗತಿಸಬೇಕು. ಅದೇ ಪ್ರಜಾಪ್ರಭುತ್ವದ ಸೌಂದರ್ಯ. ಅಂತಹ ಟೀಕೆಗಳನ್ನು ನಾನು ಸ್ವಾಗತಿಸುತ್ತೇನೆ’ ಎಂದರು.
ವಿರೋಧ ಪಕ್ಷಗಳು ಆಡಳಿತವಿರುವ ತಮಿಳುನಾಡು, ಕೇರಳ, ಪಂಜಾಬ್ನಲ್ಲಿ ಮಸೂದೆಗಳಿಗೆ ಅಂಕಿತ ಹಾಕುವ ವಿಚಾರದಲ್ಲಿ ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರಗಳ ನಡುವಿನ ಮುಸುಕಿನ ಗುದ್ದಾಟ ತಾರಕ್ಕೇರಿದ್ದು, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಬೆಳವಣಿಗೆಗಳ ನಡುವೆ ಬೋಸ್ ಅವರ ಹೇಳಿಕೆ ಅಚ್ಚರಿ ಮೂಡಿಸಿದೆ.